ತ್ರಿವಳಿ ತಲಾಖ್ ನಿಷೇಧದಿಂದ ಮುಸ್ಲಿಂ ಮಹಿಳೆಯರ ಆತ್ಮವಿಶ್ವಾಸ ಬಲವರ್ಧನೆಯಾಗಿದೆ: ಕೇಂದ್ರ ಸಚಿವ ನಖ್ವಿ

ನವದೆಹಲಿ: ತ್ರಿವಳಿ ತಲಾಖ್‌ ವಿರುದ್ಧ ಕಾನೂನು ಜಾರಿಗೊಳಿಸಿದ್ದರಿಂದ ಮುಸ್ಲಿಂ ಮಹಿಳೆಯರ ಆತ್ಮವಿಶ್ವಾಸ ವೃದ್ಧಿಸುವುದರ ಜತೆಗೆ ಸ್ವಾವಲಂಬನೆಯಲ್ಲೂ ಬಲವರ್ಧನೆಗೊಂಡಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದರು.
‘ಮುಸ್ಲಿಂ ಮಹಿಳಾ ಕಾಯ್ದೆ, 2019ರ (ಮದುವೆ ಹಕ್ಕುಗಳ ರಕ್ಷಣೆ)’ ಮೊದಲ ವರ್ಷಾಚರಣೆ ಹಿನ್ನೆಲೆಯಲ್ಲಿ ದೇಶದ ಮುಸ್ಲಿಂ ಮಹಿಳೆಯರನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು.
ಹಿಂದೆ ತ್ರಿವಳಿ ತಲಾಖ್ ಅನ್ನು ವೋಟ್‌ ಬ್ಯಾಂಕ್ ರಾಜಕೀಯಕ್ಕಾಗಿ ಬಳಸುತ್ತಿದ್ದರು. ಆದರೆ ಇದೀಗ ಪ್ರಧಾನಿ ಮೋದಿ ಸರ್ಕಾರವು ತ್ರಿವಳಿ ತಲಾಖ್‌ ಅನ್ನು ಕ್ರಿಮಿನಲ್ ಅಪರಾಧವನ್ನಾಗಿಸಿದೆ’ ಎಂದು ಹೇಳಿದರು.
ಮೋದಿ ಸರ್ಕಾರವು ರಾಜಕೀಯ ಸಬಲೀಕರಣಕ್ಕೆ ಬದ್ಧವಾಗಿದೆಯೇ ವಿನಃ ರಾಜಕೀಯ ಶೋಷಣೆಗಲ್ಲ ಎಂದೂ ಅವರು ಹೇಳಿದರು.
ಆಗಸ್ಟ್ 1 ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಎಂಬ ಸಾಮಾಜಿಕ ಅನಿಷ್ಟದಿಂದ ಬಿಡುಗಡೆಯಾದ ದಿನ. ದೇಶದ ಇತಿಹಾಸದಲ್ಲೇ ಈ ದಿನ ‘ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನ’ವೆಂದು ಪರಿಗಣಿತವಾಗಿದೆ ಎಂದೂ ಅವರು ಹೇಳಿದರು.