ಗೂಡ್ಸ್ ವಾಹನದಲ್ಲಿ ಕಾರ್ಮಿಕರ ಸಾಗಾಟ: 10ಸಾವಿರ ದಂಡ

ಉಡುಪಿ: ಪೋಲೀಸರ ಎಚ್ಚರಿಕೆಯನ್ನು ಲೆಕ್ಕಿಸದೆ ಗೂಡ್ಸ್ ವಾಹನದಲ್ಲಿ ಸೆಂಟ್ರಿಂಗ್ ಮಷೀನ್ ಗಳೊಂದಿಗೆ ಕೂಲಿ ಕಾರ್ಮಿಕರನ್ನು ಸಾಗಿಸುವ ಕೆಲಸ ನಿರಂತರ ಹಾಗೂ ನಿರಾತಂಕವಾಗಿ ನಡೆಯುತ್ತಿದ್ದು ಪೊಲೀಸರು ವಾಹನವನ್ನು ಬೆನ್ನಟ್ಟಿ ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾರ್ಕಳ ನ್ಯಾಯಾಲಯವು ವಾಹನದ ಮಾಲಕ ನಾಗಪ್ಪ ಎಂಬವರಿಗೆ 10 ಸಾವಿರ ದಂಡವಿಧಿಸಿದೆ.

ಕಾರ್ಕಳ ಪರಿಸರದಲ್ಲಿ ಮಾತ್ರವಲ್ಲ ಜಿಲ್ಲೆಯದ್ಯಂತ ಬೆಳಿಗ್ಗೆ ಕೆಲಸಕ್ಕೆ ಕರೆದುಕೊಂಡು ಮತ್ತು ಕೆಲಸ ಮುಗಿಸಿ ಹಿಂದಿರುಗುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರನ್ನು ಸಿಮೆಂಟ್ ಕಾಂಕ್ರೀಟ್ ಮಷೀನ್ ನೊಟ್ಟಿಗೆ ತುಂಬಿಕೊಂಡು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಪೊಲೀಸರು ಈ ಬಗ್ಗೆ ಹಲವಾರು ಬಾರಿ ಖಡಕ್ ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನದ ಕಾಂಟಾಕ್ಟ್ದಾರರು ಮತ್ತದೇ ಚಾಳಿಯನ್ನು ಮುಂದುವರಿಸುತಿದ್ದು, ವಾಹನದಲ್ಲಿ ಇಷ್ಟಬಂದಂತೆ ಕಾರ್ಮಿಕರನ್ನು ತುಂಬಿಸಿಕೊಂಡು, ಅತಿವೇಗ ಹಾಗೂ ನಿರ್ಲಕ್ಷದಿಂದ ವಾಹನ ಚಲಾಯಿಸುವುದು ದಾರಿಯಲ್ಲಿ ಓಡಾಡುವ ಇತರ ವಾಹನಗಳಿಗೂ ತೊಂದರೆಯಾಗುವ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿತ್ತು. ಈ ಬಗ್ಗೆ ಕಾರ್ಯಪ್ರವ್ರತರಾದ ಕಾರ್ಕಳ ನಗರ ಪೊಲೀಸರು ವಾಹನವನ್ನು ಬೆನ್ನಟ್ಟಿ ಕಾರ್ಕಳ ಪುರಸಭಾ ವ್ಯಾಪ್ತಿಯ ಶಿವತಿಕೆರೆ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿ ಕಾರ್ಕಳ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಕೆಲವು ವರ್ಷಗಳ ಹಿಂದೆ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಿರ್ಗಾನ ಗ್ರಾಮದ ಶಾಲಾ ಮುಂಭಾಗದ ತಿರುವಿನಲ್ಲಿ ವಾಹನದಲ್ಲಿದ್ದ ಸಿಮೆಂಟ್ ಕಾಂಕ್ರೀಟ್ ಮಷೀನ್ ಕಾರ್ಮಿಕರ ಮೇಲೆ ಮಗುಚಿ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಹಲವಾರು ಕಾರ್ಮಿಕರು ಗಂಭೀರ ಗಾಯ ಗೊಂಡಿದ್ದರು ಕೆಲವಾರು ದಿನ ಘಟನೆಯ ಗಂಭೀರತೆಯನ್ನು ಅರಿತು ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದ್ದರೂ ಪುನಃ ಹಿಂದಿಂನಂತೆ ಕಾರ್ಮಿಕರನ್ನು ಕೊಂಡೋಯ್ಯುತಿದ್ದು ಅಪಾಯವನ್ನು ಅರಿತಿದ್ದರೂ ಖ್ಯಾರೆ ಎನ್ನದ ಕಾರ್ಮಿಕರಿಗೆ ಹಾಗೂ ಕಾಂಟಾಕ್ಟ್ ದಾರರಿಗೆ ನ್ಯಾಯಾಲಯದ ಮೂಲಕ ದಂಡ ಪಾವತಿಸುವಂತೆ ಮಾಡಿ ಎಚ್ಚರಿಕೆಯ ಕರೆಗಂಟೆ ನೀಡಿದೆ ಹಾಗೂ ಸಾರ್ವಜನಿಕ ವಲಯದಲ್ಲಿ ಪೋಲೀಸರ ಬಗ್ಗೆ ಪ್ರಶಂಸೆಯ ಮಾತು ಕೇಳಿಬರುತ್ತಿದೆ