ಆಗುಂಬೆ ಘಾಟಿ ತಿರುವಿನಲ್ಲಿ ಲಾರಿ ಟಯರ್ ಸ್ಫೋಟ: ಸಂಚಾರ ವ್ಯವಸ್ಥೆಯಲ್ಲಿ ಕೆಲ ಕಾಲ ವ್ಯತ್ಯಯ

ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಲಾರಿ ಟೈರ್ ಸ್ಪೋಟಗೊಂಡು ಕೆಲವು ಹೊತ್ತು ವಾಹನ ಸಂಚಾರ ಸ್ಥಗಿತವಾಗಿತ್ತು.

ಘಾಟಿಯ 8ನೇ ತಿರುವಿನಲ್ಲಿ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಕ್ಯಾಂಟರ್ ಲಾರಿಯ ಹಿಂಬದಿ ಟೈರ್ ಸ್ಪೋಟಗೊಂಡಿದೆ. ತಿರುವಿನಲ್ಲೇ ಲಾರಿ ನಿಂತಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ಕಷ್ಟವಾಗಿತ್ತು. ಇದರಿಂದ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ.

ತಿರುವಿನಲ್ಲಿ ಲಾರಿ ನಿಂತಿದ್ದರಿಂದ ಹಿಂಬದಿಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ತೀರ್ಥಹಳ್ಳಿ ಕಡೆಯಲ್ಲೂ ದೊಡ್ಡ ಸಂಖ್ಯೆಯ ವಾಹನಗಳು ನಿಂತಿದ್ದವು. ಪೊಲೀಸರು ಕ್ರೇನ್ ತರಿಸಿ ಲಾರಿಯನ್ನು ಪಕಕ್ಕೆ ಸರಿಸಿದ್ದಾರೆ. ಬಸ್ಸುಗಳು ಸೇರಿದಂತೆ ವಾಹನಗಳು ಸುಗಮವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಯಿತು. ಸೋಮೇಶ್ವರದಲ್ಲಿ ಘಾಟಿಯ ಪ್ರವೇಶದಲ್ಲಿ ಪೊಲೀಸರು ವಾಹನಗಳನ್ನು ತಡೆ ಹಿಡಿದಿದ್ದು, ಒಮ್ಮೆಗೆ ಕೆಲವೇ ವಾಹನಗಳನ್ನು ಘಾಟಿಯ ಮೇಲೆ ಬಿಡಲಾಗಿದೆ.