ಸಚಿವ ಸಂಪುಟ ವಿಸ್ತರಣೆ ಸಂಭವ್ಯ ಪಟ್ಟಿ ತಯಾರಿ: ನಾಳೆ ಬಿ.ಎಸ್. ಯಡಿಯೂರಪ್ಪ ದೆಹಲಿಗೆ

ಬೆಂಗಳೂರು, ಜ.29: ರಾಜ್ಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಚಟುವಟಿಕೆಗಳು ಗರಿಗೆದರಿದ್ದು, ಸಂಪುಟ ವಿಸ್ತರಣೆ ಸಂಬಂಧ ಸಂಭಾವ್ಯ ಪಟ್ಟಿ ತಯಾರಾಗಿದೆ.
ಈ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಳೆ (ಗುರುವಾರ) ದೆಹಲಿಗೆ ತೆರಳಿಲಿದ್ದು, ಅಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಈ ಪಟ್ಟಿಯನ್ನು ಹೈಕಮಾಂಡ್ ಅಂತಿಮ ಮಾಡುತ್ತದೆಯೇ ಅಥವಾ ದೆಹಲಿ ಚುನಾವಣೆಯ ನಂತರ ಅಂತಿಮ ಮಾಡುತ್ತದೆಯೋ ಎನ್ನುವುದೂ ಕುತೂಹಲ‌ ಮೂಡಿಸಿದೆ.
ಒಂದುವೇಳೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದರೆ ಎರಡೇ ದಿನದಲ್ಲಿ ಸಂಚಿವ ಸಂಪುಟ ವಿಸ್ತರಣೆಯಾಗಲಿದೆ.
ಬಿಜೆಪಿ ಸರಕಾರ ರಚನೆಯಾಗಲು ಕಾರಣರಾದ 11 ಮಂದಿ ಶಾಸಕರ ಹೆಸರು ಬಿಎಸ್ವೈ ಅವರ ಪಟ್ಟಿಯಲ್ಲಿದೆ ಎಂದು ತಿಳಿದು ಬಂದಿದೆ. ಹಿರಿಯ ಶಾಸಕ ಉಮೇಶ್ ಕತ್ತಿ ಸೇರಿದಂತೆ ಬೆಳಗಾವಿಯಲ್ಲಿ ಗೆದ್ದ ಶಾಸಕರೂ ಸಂಪುಟದಲ್ಲಿದ್ದಾರೆ ಎಂದು ಘೋಷಣೆ ಮಾಡಲಾಗಿದೆ.
ಅದರೆ ಹೈಕಮಾಂಡ್ ಮೂಲ ಬಿಜೆಪಿಗರಿಗೂ ಸಚಿವ ಸ್ಥಾನ‌ ನೀಡುವಂತೆ ಸೂಚಿಸಿದೆ ಎನ್ನುವ ಮಾತು ಕೆಲವು ಮೂಲಗಳಿಂದ ತಿಳಿದು ಬಂದಿದೆ.‌ ಉಪಚುನಾವಣೆಯಲ್ಲಿ ಗೆದ್ದ 12 ಶಾಸಕರ ಪೈಕಿ 11 ಮಂದಿಗೆ ಸಚಿವ ಸ್ಥಾನ‌ ನೀಡಲು ಬಿಎಸ್ವೈ ಮುಂದಾಗಿದ್ದು, ಆದರೆ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದು ಕಾದು ನೋಡಬೇಕಿದೆ.