ಮಲ್ಪೆ: ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ ವತಿಯಿಂದ ಮರಳು ಶಿಲ್ಪ ಕಲೆ ಅನಾವರಣ

ಮಲ್ಪೆ: ವಿಶ್ವದಾದ್ಯಂತ ಪಾರ್ಶ್ವವಾಯು ಸಂಭವವನ್ನು ಕಡಿಮೆ ಮಾಡಲು ಪ್ರತಿ ವರ್ಷ ಅಕ್ಟೋಬರ್ 29 ರಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತದೆ. ಪಾರ್ಶ್ವವಾಯುವಿನಿಂದಾಗುವ ಗಂಭೀರ ಸ್ವರೂಪ, ಪಾರ್ಶ್ವವಾಯುವಿನ ಬಗ್ಗೆ ಜಾಗೃತಿ ಮೂಡಿಸಲು, ಪಾರ್ಶ್ವವಾಯುವಿನ ಅಪಾಯದ ಅಂಶಗಳು ಮತ್ತು ಚಿಹ್ನೆಗಳ ಬಗ್ಗೆ ಉತ್ತಮ ಸಾರ್ವಜನಿಕ ಅರಿವಿನ ಮೂಲಕ ಪಾರ್ಶ್ವವಾಯುವಿನ ಹೊರೆಯನ್ನು ಕಡಿಮೆ ಮಾಡುವ ವಿಧಾನಗಳ ಕುರಿತು ಮಾತನಾಡಲು ಉತ್ತಮ ಅವಕಾಶವನ್ನು ಈ ದಿನವು ಕಲ್ಪಿಸಿದೆ.

ಈ ದಿನದ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ನರವಿಜ್ಞಾನ ವಿಭಾಗವು ಮಲ್ಪೆ ಕಡಲ ತೀರದಲ್ಲಿ ಪಾರ್ಶ್ವವಾಯು ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮರಳು ಶಿಲ್ಪಕಲೆಯನ್ನು ಅನಾವರಣಗೊಳಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿತು.

ಕೆಎಂಸಿ ಮಣಿಪಾಲದ ಡೀನ್ ಡಾ. ಶರತ್ ಕೆ ರಾವ್ ಅವರು ಮರಳು ಕಲಾ ಶಿಲ್ಪವನ್ನು ಅನಾವರಣಗೊಳಿಸಿ ಮಾತನಾಡಿ, ಪಾರ್ಶ್ವವಾಯು ಅಂದರೆ ಮೆದುಳಿನ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿ ಆ ಭಾಗವು ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ಶೇಕಡಾ 33 ರಷ್ಟು ಜನ ಸಾವನ್ನಪ್ಪುತ್ತಾರೆ ಹಾಗು ಇನ್ನೂ ಶೇಕಡಾ 33 ರಷ್ಟು ಜನ ಶಾಶ್ವತ ಅಂಗನ್ಯೂನತೆ ಹೊಂದುತ್ತಾರೆ. ಇದನ್ನು ನಿಯಂತ್ರಿಸಲು ಸಮತೋಲನ ಆಹಾರ ಹಾಗೂ ವ್ಯಾಯಾಮ ಅವಶ್ಯ.

ರೋಗಲಕ್ಷಣಗಳು ಕಂಡ 4.5 ಗಂಟೆಗಳ ಒಳಗಾಗಿ ವ್ಯಕ್ತಿಯನ್ನು ಆಸ್ಪತ್ರೆ ದಾಖಲಿಸಿದರೆ ಸಂಪೂರ್ಣ ಗುಣಮುಖರಾಗುವ ಸಾಧ್ಯತೆ ಹೆಚ್ಚಿದೆ ಎಂದರು.

ಈ ಸಂದರ್ಭದಲ್ಲಿ ಮಾಹೆ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನರವಿಜ್ಞಾನ ವಿಭಾಗ ಮುಖ್ಯಸ್ಥೆ ಡಾ ಅಪರ್ಣಾ ಆರ್ ಪೈ ಸ್ವಾಗತಿಸಿದರು, ನರಶಸ್ತ್ರಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ ಗಿರೀಶ್ ಮೆನನ್ ಪಾರ್ಶ್ವವಾಯು ಆರೋಗ್ಯ ಮತ್ತು ಪಾರ್ಶ್ವವಾಯು ದಿನದ ಕುರಿತು ಅವಲೋಕನ ಮಾಡಿದರು. ಡಾ ಶ್ರೀಪದ್ಮ ವಿ ಕಾರ್ಯಕ್ರಮ ನಿರೂಪಿಸಿದರು.