ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ಪ್ರತಿಭಾ ಪ್ರದರ್ಶನ ಸಂಪನ್ನ

ಕುಂದಾಪುರ : ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2021-22ನೇ ಸಾಲಿನ ಪ್ರತಿಭಾ ಪ್ರದರ್ಶನ ಜೂನ್ 03 ರಂದು ಸಂಪನ್ನಗೊಂಡಿತು.

ಕಾಲೇಜಿನ ಅಂತರ್-ತರಗತಿ ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ 14 ತಂಡಗಳು ಭಾಗವಹಿಸಿದ್ದವು. ಬಹಳ ವೈಶಿಷ್ಟ್ಯಮಯ ವಿಭಿನ್ನ ಶೈಲಿಯಲ್ಲಿ ಕಾರ್ಯಕ್ರಮವು ಮೂಡಿಬಂದಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಉಮೇಶ್ ಶೆಟ್ಟಿ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿ ಹಾಗೂ ತೀರ್ಪುಗಾರರಾಗಿ ಆಗಮಿಸಿದ್ದ ಕಾರ್ಕಳದ ಶಿಕ್ಷಕಿ, ನೃತ್ಯ ನಿರೂಪಕಿ ವಂದನಾ ರೈ ಮಾತನಾಡಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಶುಭಹಾರೈಸಿದರು. ಭಾಗವಹಿಸಿದ ಎಲ್ಲಾ ತಂಡಗಳು ತಮ್ಮ ತಮ್ಮ ಪ್ರತಿಭೆಗಳನ್ನು ಬಹಳ ಅರ್ಥಪೂರ್ಣವಾಗಿ ಅನಾವರಣಗೊಳಿಸಿರುವುದನ್ನು ಶ್ಲಾಘಿಸಿದರು.

ತೀರ್ಪುಗಾರರಾಗಿ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆ ಕುಂದಾಪುರ ಕಛೇರಿ ಅಧೀಕ್ಷಕ ರಮೇಶ್ ಕುಲಾಲ್, ಆಲೂರು ಶಾಲೆಯ ಸಹಶಿಕ್ಷಕ ಉದಯ ಶೆಟ್ಟಿಯವರು ತೀರ್ಪುಗಾರಿಕೆಯ ನೆಲೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕರಾದ ರಕ್ಷಿತ್ ರಾವ್, ಶುಭಾ ಅಡಿಗ, ರೇವತಿ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ದ್ವಿತೀಯ ಬಿ.ಕಾಂ. ಸಿ. ವಿಭಾಗ, ದ್ವಿತೀಯ ಸ್ಥಾನವನ್ನು ದ್ವಿತೀಯ ಬಿ.ಕಾಂ. ಬಿ. ವಿಭಾಗ, ತೃತೀಯ ಸ್ಥಾನವನ್ನು ಪ್ರಥಮ ಬಿ.ಕಾಂ. ಸಿ. ವಿಭಾಗ ಪಡೆಯಿತು.

ಉತ್ತಮ ಸಮೂಹ ಪ್ರದರ್ಶನ ಪ್ರಶಸ್ತಿಯನ್ನು ಪ್ರಥಮ ಬಿ.ಕಾಂ. ಎ. ವಿಭಾಗ ಹಾಗೂ ಉತ್ತಮ ನಿರೂಪಕಿ ಪ್ರಶಸ್ತಿಯನ್ನು ದ್ವಿತೀಯ ಬಿ.ಸಿ.ಎ. ಆರಾಧ್ಯ, ಉತ್ತಮ ವೈಯಕ್ತಿಕ ಪ್ರತಿಭೆ ಬಿ.ಎಸ್ಸಿ. ವಿಭಾಗದ ಲಕ್ಷ್ಮೀಕಾಂತ್ ಪಡೆದರು.

ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೊವಾಡಿ ಸ್ವಾಗತಿಸಿದರು, ಉಪನ್ಯಾಸಕಿ ದೀಪಿಕಾ ರಾಘವೇಂದ್ರ ವಿಜೇತರ ಪಟ್ಟಿಯನ್ನು ವಾಚಿಸಿದರು, ಉಪನ್ಯಾಸಕಿ ಪೃಥ್ವೀಶ್ರೀ ಜಿ. ಶೆಟ್ಟಿ ನಿರೂಪಿಸಿದರು.