ಚಪ್ಪಲಿ ಧರಿಸದ ಬರಿಗಾಲ ಕಾರ್ಯಕರ್ತನಿಗೆ ಟಿಕೆಟ್‌: ಬೈಂದೂರಿನಿಂದ ಗುರುರಾಜ್‌ ಶೆಟ್ಟಿ ಗಂಟಿಹೊಳೆಗೆ ಬಿಜೆಪಿ ಟಿಕೆಟ್….

ಕುಂದಾಪುರ : ಎರಡನೇ ಪಟ್ಟಿಯಲ್ಲಿ ಬೈಂದೂರು ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಿದ್ದು ಆರೆಸ್ಸೆಸ್ ತೆಕ್ಕೆಗೆ ಬಂದಿದೆ.ಕುತೂಹಲಕ್ಕೆ ಕಾರಣವಾಗಿದ್ದ ಬಿಜೆಪಿ ಹೈಕಮಾಂಡ್ ಬುಧವಾರ ತಡರಾತ್ರಿ 23 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಮಾಡಿದೆ.

ಬೈಂದೂರು ತಾಲೂಕಿನ ಬಿಜೂರಿನ ಗಂಟಿಹೊಳೆಯ ಗುರುರಾಜ್ ಶೆಟ್ಟಿ ಗಂಟಿಹೊಳೆಗೆ ಬೈಂದೂರು ಬಿಜೆಪಿಯ ಟಿಕೆಟ್ ಘೋಷಣೆಯಾಗುವ ಮೂಲಕ ಅಧಿಕೃತ ಅಭ್ಯರ್ಥಿ ಎನ್ನಿಸಿಕೊಂಡಿದ್ದಾರೆ.

ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಗುರುರಾಜ್ ಗಂಟಿಹೊಳೆ ಆರೆಸ್ಸೆಸ್ ಸ್ವಯಂಸೇವಕರಾಗಿದ್ದಾರೆ. ಹಲವಾರು ವರ್ಷಗಳ ಕಾಲ ತನ್ನ ಕುಟುಂಬವನ್ನೇ ತೊರೆದು ಸಂಘಕ್ಕಾಗಿ ಸೇವೆ ಸಲ್ಲಿಸಿದ ಅವರು ಸುಳ್ಯ, ಪುತ್ತೂರು ಭಾಗಗಳಲ್ಲಿ ಪ್ರಚಾರಕರಾಗಿದ್ದವರು. ಪ್ರಸ್ತುತ ಶಿಕ್ಷಣ ಸಂಸ್ಥೆಯೊಂದರ ವಿಶ್ವಸ್ಥರಾಗಿರುವ ಗುರುರಾಜ್ ಸಾಲ ಮಾಡಿ ಹಲವಾರು ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ.

ಒಟ್ಟಾರೆಯಾಗಿ ಕಳೆದ ಹಲವಾರು ದಿನಗಳಿಂದ ಕುತೂಹಲಕ್ಕೆ ಕಾರಣವಾಗಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗೆ ತೆರೆಬಿದ್ದಂತಾಗಿದೆ.