ಸೆಮಿ-ಫೈನಲ್​​​ಗೆ ತಂಡಕ್ಕೆ ಸೇರಿಸಿಕೊಳ್ಳುವ ಚಿಂತನೆ : ಮುಂದಿನ ಎರಡು ಪಂದ್ಯಗಳಿಗೆ ಹಾರ್ದಿಕ್​ ಪಾಂಡ್ಯ ಅಲಭ್ಯ

ಹೈದರಾಬಾದ್​ : ಆಲ್‌ರೌಂಡರ್ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಮುಂದಿನ ಎರಡು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.ಪುಣೆಯಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್​ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ) ಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್​ ಮಾಡುವ ವೇಳೆ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್​ ಪಾಂಡ್ಯ ಚೇತರಿಸಿಕೊಳ್ಳಲು ಇನ್ನಷ್ಟೂ ದಿನಗಳು ಬೇಕಾಗಬಹುದು ಎಂಬ ಮಾಹಿತಿಯನ್ನು ಮೂಲಗಳು ನೀಡಿವೆ.

ಪುಣೆಯ ಎಮ್​ಸಿಎ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ವಿಶ್ವಕಪ್‌ನ ಭಾರತದ ನಾಲ್ಕನೇ ಲೀಗ್ ಪಂದ್ಯದಲ್ಲಿ ಬೌಲಿಂಗ್​ ಮಾಡುವಾಗ ಎಡ ಪಾದದ ನೋವಿನಿಂದ ಬಳಲಿದರು. ಓವರ್​​ನ ಮೂರು ಬಾಲ್​ ಮಾಡಿದ್ದ ಅವರು ನಂತರ ಮೈದಾನದಿಂದ ಹೊರ ನಡೆದಿದ್ದರು. ಅವರ ಓವರ್​ನ್ನು ಮಾಜಿ ನಾಯಕ ವಿರಾಟ್​ ಮುಂದುವರೆಸಿದ್ದರು. ಇದರ ಪರಿಣಾಮವಾಗಿ ಅಕ್ಟೋಬರ್ 22 ರಂದು ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದರು. ಬಾಂಗ್ಲಾ ಪಂದ್ಯದ ನಂತರ ಹಾರ್ದಿಕ್​ ಅವರನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ವೈದ್ಯಕೀಯ ಚಿಕಿತ್ಸೆಗೆ ಕರೆತರಲಾಗಿತ್ತು.

ಟೀಮ್​ ಇಂಡಿಯಾ ವಿಶ್ವಕಪ್​ನ ಲೀಗ್​ ಹಂತದಲ್ಲಿ ಮುಂದೆ ಅಕ್ಟೋಬರ್ 29 ರಂದು ಲಕ್ನೋದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ನಂತರ ನವೆಂಬರ್ 2 ರಂದು ಮುಂಬೈನಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಲಕ್ನೋದಲ್ಲಿ ಆಂಗ್ಲರ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ಬಹುತೇಕ ಅಲಭ್ಯರಾಗಿರುತ್ತಾರೆ ಮತ್ತು ಅವರು ತಂಡದೊಂದಿಗೆ ಪ್ರವಾಸದಲ್ಲೂ ಇರುವುದಿಲ್ಲ. ಮುಂಬೈ ಪಂದ್ಯದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಬಂದಿಲ್ಲ.

ಆತಿಥೇಯ ಭಾರತವು ನಡೆಯುತ್ತಿರುವ ಪುರುಷರ ಏಕದಿನ ವಿಶ್ವಕಪ್‌ನಲ್ಲಿ ಆಡಿದ ಐದು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ತಂಡಕ್ಕೆ ಇನ್ನೊಂದೇ ಗೆಲುವು ಸಿಕ್ಕರೂ ಪ್ಲೇ ಆಫ್​ಗೆ ಕ್ವಾಲಿಫೈ ಆಗಲಿದೆ. ಹಾರ್ದಿಕ್​ ಹೊರತಾಗಿರೂ ನ್ಯೂಜಿಲೆಂಡ್​ ವಿರುದ್ಧ ಸಮತೋಲನದ ಪ್ರದರ್ಶನವನ್ನು ತಂಡ ನೀಡಿದೆ.ವರದಿ ಒಂದರ ಪ್ರಕಾರ ಉಪನಾಯಕ ಹಾರ್ದಿಕ್​ ಲೀಗ್​ನ ಕೊನೆಯ ಎರಡು ಪಂದ್ಯದ ವೇಳೆಗೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಅಂದರೆ ನ.5 ದಕ್ಷಿಣ ಆಫ್ರಿಕಾ ಮತ್ತು ನ.12 ರಂದು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯ ಆಡುವ ನಿರೀಕ್ಷೆ ಇದೆ. ಸೆಮಿ-ಫೈನಲ್ ವೇಳೆಗೆ ಸಂಪೂರ್ಣ ಫಿಟ್​ ಆಗಿರುವ ಉದ್ದೇಶದಿಂದ ಹಾರ್ದಿಕ್​ ಚೇತರಿಕೆಗೆ ಬೇಕಾದಷ್ಟು ಸಮಯವನ್ನು ಕೊಡುವ ಬಗ್ಗೆ ಬಿಸಿಸಿಐ ಚಿಂತಿಸಿದೆ ಎಂದು ಸಹ ಹೇಳಲಾಗಿದೆ. ಹಾರ್ದಿಕ್​ ಸಂಪೂರ್ಣ ಫಿಟ್​ ಆಗುವವರೆಗೆ ಎನ್​ಸಿಎಯಲ್ಲಿ ವೈದ್ಯಕೀಯ ನಿಗಾದಲ್ಲಿರಲಿದ್ದಾರೆ.