ಕಲ್ಯಾ: ಮಾಲಕಿ ಮನೆಯಲ್ಲಿಲ್ಲದ ವೇಳೆ ಕಳ್ಳತನ; ಕೃತ್ಯವೆಸಗಿದ ಸ್ನೇಹಿತೆಯ ಬಂಧನ

ಉಡುಪಿ: ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕಂಗಿತ್ತುವಿನ ಉಷಾ ಜಗದೀಶ್‌ ಆಂಚನ್‌ ಎಂಬವರ ಮನೆಯಲ್ಲಿ ಡಿಸೆಂಬರ್ 3ರಂದು ಕಳವು ಪ್ರಕರಣ ನಡೆದಿದ್ದು, ಕಳ್ಳರು ಮನೆಯಲ್ಲಿದ್ದ 4.50 ಲಕ್ಷ ರೂ. ಮೌಲ್ಯದ ಸುಮಾರು 156 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಬೇಧಿಸಿರುವ ಪೊಲೀಸರು ಕಾರ್ಕಳದಲ್ಲಿ ನಡೆದ ಕಳ್ಳತನದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬಂಟ್ವಾಳ ಅರಂಬೋಡಿ ಕಾಂತರಬೆಟ್ಟು ನಿವಾಸಿ ಪ್ರಸಾದ್‌ (34) ಹಾಗು ಕಳ್ಳತನಕ್ಕೆ ಸಹಕರಿಸಿದ ಆರೋಪದಲ್ಲಿ ಶಿಬಾ (39) ಎಂಬಾಕೆ ಬಂಧನಕ್ಕೆ ಒಳಗಾದ ಆರೋಪಿಗಳಾಗಿದ್ದಾರೆ.

ಆರೋಪಿ ಪ್ರಸಾದ್‌ ಮೇಲೆ ಈ ಹಿಂದೆ ಬಂಟ್ವಾಳ ಗ್ರಾಮಾಂತರ, ಮೂಡುಬಿದಿರೆ, ಕಾರ್ಕಳ ನಗರ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ಮತ್ತು ಮೂಡುಬಿದಿರೆ ಠಾಣೆಯಲ್ಲಿ ಸುದರ್ಶನ ಜೈನ್‌ ಅವರ ಕೊಲೆ ಹಾಗೂ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣಗಳು ದಾಖಲಾಗಿದ್ದವು. ಕಳ್ಳತನವಾದ ಮನೆಯ ಮಾಲಕಿ ಉಷಾ ಅಂಚನ್‌ ಹಾಗೂ ಕಳ್ಳತನಕ್ಕೆ ಸಹಕರಿಸಿದ ಶಿಬು ಹಲವು ವರ್ಷಗಳ ಪರಿಚಯಸ್ಥರು. ಇಬ್ಬರ ಮನೆಗಳ ನಡುವಿನ ಅಂತರ ಸುಮಾರು 50 ಮೀ. ದೂರವಷ್ಟೆ ಇದ್ದು, ಅವರಿಬ್ಬರೂ ಜತೆಯಾಗಿ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ದರು.ಕಳ್ಳತನವಾದ ದಿನ ರಾತ್ರಿ ಇಬ್ಬರೂ ಜತೆಯಾಗಿ ಪರಿಸರದಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು.

ಕಳ್ಳತನದ ಬಗ್ಗೆ ಮೊದಲೇ ಯೋಜನೆ ರೂಪಿಸಿಕೊಂಡಿದ್ದ ಶಿಬಾ ತನ್ನ ಕಳ್ಳ ಸಂಬಂಧಿಗೆ ಮನೆಯಲ್ಲಿ ಯಾರೂ ಇಲ್ಲದಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ. ಆಕೆಯ ಮಾಹಿತಿಯನ್ನಾಧರಿಸಿ ಆತ ಅಡುಗೆ ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿ ಕಳ್ಳತನಗೈದಿದ್ದ. ಕಳ್ಳತನದ ಪ್ರಕರಣ ಬೆಳಕಿಗೆ ಬಂದ ಮೇಲೂ ಶಿಬಾ ಅಮಾಯಕಿಯಂತೆ ನಾಟಕವಾಡಿದ್ದಳು ಎನ್ನಲಾಗಿದೆ. ಇದೀಗ ಕಾರ್ಕಳ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಕ್ಷಯ್‌ ಹಾಕೆ ಮಚ್ಚಿಂದ್ರ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.