ಸಂಗೀತ ನಿರ್ದೇಶಕ ಗುರುಕಿರಣ್ ಅತ್ತೆ ಮನೆಯಲ್ಲಿ 2.50 ಲಕ್ಷ ರೂ ನಾಪತ್ತೆ

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಅತ್ತೆ ಮನೆಯಲ್ಲಿ ಕಳ್ಳತನವಾಗಿದೆ. ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಡಿಸೆಂಬರ್ 31ರಂದು ಮಧ್ಯಾಹ್ನ ಚಂದ್ರ ಲೇಔಟ್​ನಲ್ಲಿರುವ ತಮ್ಮ ಮನೆಯ ಕೋಣೆಯ ಕಪಾಟಿನಲ್ಲಿ 2.50 ಲಕ್ಷ ರೂ.ಗಳನ್ನು ಗುರುಕಿರಣ್ ಅತ್ತೆ ಕಸ್ತೂರಿ ಶೆಟ್ಟಿ ಇಟ್ಟಿದ್ದರು. ಜ.5 ರಂದು ಹಣಕ್ಕಾಗಿ ಹುಡುಕಿದಾಗ ಹಣ ಅಲ್ಲಿರಲಿಲ್ಲ. ಎಷ್ಟು ಹುಡುಕಾಡಿದರೂ ಹಣ ಸಿಗದೇ ಇದ್ದಾಗ ಜನವರಿ 7 ರಂದು ಚಂದ್ರಲೇಔಟ್ ಪೊಲೀಸ್ ಠಾಣೆಗೆ ಗುರುಕಿರಣ್ ಅತ್ತೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಗುರುಕಿರಣ್ ಅತ್ತೆ ಕಸ್ತೂರಿ ಶೆಟ್ಟಿ ಅವರು ತಮ್ಮ ಮನೆ ಕೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಣ ಇಟ್ಟಿದ್ದ ಕೋಣೆಗೆ ಹೊರಗಿನ ವ್ಯಕ್ತಿಗಳು ಯಾರೂ ಹೋಗುತ್ತಿರಲಿಲ್ಲ. ಹೀಗಾಗಿ ಮನೆ ಕೆಲಸ ಮಾಡುವ ರತ್ನಮ್ಮ ಹಣ ಕದ್ದಿರಬಹುದು ಎಂದು ದೂರು ನೀಡಿದ್ದಾರೆ.

ಸದ್ಯ ಮನೆ ಕೆಲಸದಾಕೆ ರತ್ನಮ್ಮ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಚಂದ್ರಲೇಔಟ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.