ಕೋಟೇಶ್ವರ: ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಅರ್ಧದಲ್ಲೇ ಬಿಟ್ಟು ಪರಾರಿ

ಕುಂದಾಪುರ: ಇಲ್ಲಿನ ಕೋಟೇಶ್ವರ ಸಮೀಪದ ಕಟ್ಕೆರೆ ಮಹಾದೇವಿ ಕಾಳಿಕಾಂಬಾ ದೇವಸ್ಥಾನದಲ್ಲಿ ಬುಧವಾರ ಮಧ್ಯರಾತ್ರಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಸೇಫ್ ಕುಂದಾಪುರ ಸಿಬ್ಬಂದಿಯ ಸಮಯಪ್ರಜೆಯಿಂದಾಗಿ ಕಳ್ಳರು ಅಲ್ಪ ಪ್ರಮಾಣದ ಬೆಳ್ಳಿ ಆಭರಣಗಳನ್ನು ಧೋಚಿ ಅರ್ಧದಲ್ಲೇ ಬಿಟ್ಟು ಪರಾರಿಯಾದ ಘಟನೆ ನಡೆದಿದೆ.

ದೇವಳದ ಬಾಗಿಲಿಗೆ ಅಳವಡಿಸಿರುವ ಅಲ್ಪಸ್ವಲ್ಪ ಬೆಳ್ಳಿ ಕವಚ, ದೇವರ ಕೈಯ್ಯಲ್ಲಿದ್ದ ಖಡ್ಗ, ಪರಶು, ಡಿವಿಆರ್ ಕದ್ದು ಕಳ್ಳರು ಕಾಲ್ಕಿತ್ತಿದ್ದಾರೆ. ಕಳ್ಳತನವಾದ ಆಭರಣಗಳ ಮೌಲ್ಯ ಸುಮಾರು ಇಪ್ಪತ್ತೈದು ಸಾವಿರ ರೂ ಎಂದು ಅಂದಾಜಿಸಲಾಗಿದೆ. ಒಂದುವರೆ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸಾಶವಾಗಿದೆ.

ಘಟನೆಯ ವಿವರ:
ಬುಧವಾರ ಮಧ್ಯರಾತ್ರಿ ದೇವಳಕ್ಕೆ ಆಗಮಿಸಿದ ಮೂರು ಜನರ ತಂಡ ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿ ಬಾಗಿಲ ಚಿಲಕ ಒಡೆದು ಒಳಪ್ರವೇಶಿಸಿ ದೇವರ ಆಭರಣ ಕದ್ದೊಯ್ಯಲು ಪ್ರಯತ್ನ ನಡೆಸಿತ್ತು. ಲೈವ್ ಕ್ಯಾಮೆರಾ ಕಣ್ಗಾವಲಲ್ಲಿದ್ದ ಸೇಫ್ ಕುಂದಾಪುರ ಪ್ರಾಜೆಕ್ಟ್‍ನ ಸೈನ್ ಇನ್ ಸೆಕ್ಯೂರಿಟಿ ಸಿಬ್ಬಂದಿಗಳು ಕೂಡಲೇ ಬೀಟ್ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ದೇವಳಕ್ಕೆ ಆಗಮಿಸಿದಾಗ ಪೊಲೀಸರ ವಾಹನ ಕಂಡು ಕಳ್ಳರು ಅರ್ಧಂಬರ್ಧ ಬೆಳ್ಳಿಯ ಆಭರಣಗಳನ್ನು ಕದ್ದು ದೇವಳದ ಆವರಣ ಗೋಡೆ ಹಾರಿ ಪರಾರಿಯಾಗಿದ್ದಾರೆ.

ಭಾರೀ ಮೊತ್ತದ ಮೌಲ್ಯದ ಆಭರಣಗಳಿತ್ತು!:
ಕಟ್ಕೆರೆ ಕಾಳಿಕಾಂಬ ದೇವಸ್ಥಾನದಲ್ಲಿ ದೇವರ ಆಭರಣವೂ ಸೇರಿದಂತೆ ಭಾರೀ ಮೊತ್ತದ ಬೆಳ್ಳಿಯ ಆಭರಣಗಳು ಇದ್ದವು. ದೇವಳದಲ್ಲಿ 26ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳು, ಇನ್ನಿತರೆ 5ಲಕ್ಷ ಮೌಲ್ಯದ ವಸ್ತುಗಳಿದ್ದವು. ಈ ಎಲ್ಲಾ ಆಭರಣಗಳನ್ನು ಕಳ್ಳತನ ನಡೆಸಲು ಹೊಂಚು ಹಾಕಿ ಬಂದಿದ್ದ ಕಳ್ಳರು ಸೇಫ್ ಕುಂದಾಪುರ ಸಿಬ್ಬಂದಿಗಳ ಸಮಯಪ್ರಜೆಯಿಂದಾಗಿ ಮಧ್ಯದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. 2014ರಲ್ಲೂ ಇದೇ ದೇವಳದಲ್ಲಿ ಭಾರೀ ಪ್ರಮಾಣದ ಕಳ್ಳತನ ನಡೆದಿದ್ದು, ಅಂದು ಸರಿಸುಮಾರು 10 ಲಕ್ಷರೂ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಇದೀಗ ಸೇಫ್ ಕುಂದಾಪುರ ಸಿಬ್ಬಂದಿಯ ಸಮಯಪ್ರಜೆಯಿಂದಾಗಿ ಕಳವಾಗಬಹುದಾದ ಭಾರೀ ಮೊತ್ತದ ಆಭರಣ ಭದ್ರವಾಗಿದೆ.

ಸೇಫ್ ಕುಂದಾಪುರ ಸಮಯಪ್ರಜೆಗೆ ಉಳಿದ ಆಭರಣ ಸೇಫ್:
ಕಳ್ಳತನ ನಡೆಯುವುದನ್ನು ತಪ್ಪಿಸಲು ಎಎಸ್‍ಪಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ ಸೇಫ್ ಕುಂದಾಪುರ ಪ್ರಾಜೆಕ್ಟ್‍ನ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆ ಲೈವ್ ಕ್ಯಾಮೆರಾವನ್ನು ನಗರದ ಕೆಲ ವಾಣಿಜ್ಯ ಮಳಿಗೆಗಳು, ಅಂಗಡಿ ಶಾಪ್, ಬ್ಯಾಂಕ್ ಹಾಗೂ ದೇವಸ್ಥಾನಗಳಲ್ಲಿ ಅಳವಡಿಸಿತ್ತು. ಕಳ್ಳತನ ನಡೆಯುತ್ತಿರುವಾಗಲೇ ಕಳ್ಳರನ್ನು ತಕ್ಷಣವೇ ಸೆರೆಹಿಡಿಯುವ ವಿನೂತನ ಪ್ರಯತ್ನಕ್ಕೆ ಎಎಸ್‍ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಉದ್ಯಮಿ ಕೃಷ್ಣ ಪೂಜಾರಿಯವರ ಮಾಲೀಕತ್ವದ ಸೇಫ್ ಕುಂದಾಪುರ ಹೆಸರಿನ ಸಂಸ್ಥೆ ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿತ್ತು. ರಾತ್ರಿ ವೇಳೆಯಲ್ಲಿ ಸೇಫ್ ಕುಂದಾಪುರದ ಪ್ರಾಜೆಕ್ಟ್‍ನ ಅಡಿಯಲ್ಲಿ ಅಳವಡಿಸಿರುವ ಸಿಸಿ ಟಿವಿ ದೃಶ್ಯಾವಳಿಗಳನ್ನು ಲೈವ್ ಆಗಿ ವೀಕ್ಷಿಸುವ ಸಿಬ್ಬಂದಿಗಳು ಅಪರಿಚಿತ ವ್ಯಕ್ತಿಗಳು ಕಂಡರೆ ನೇರವಾಗಿ ಆ ಭಾಗದ ಬೀಟ್ ಸಿಬ್ಬಂದಿಗಳಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಕುಂದಾಪುರದಲ್ಲಿ ಸೈನ್ ಇನ್ ಸೆಕ್ಯೂರಿಟಿ ಆರಂಭವಾದ ಅಂದಿನಿಂದ ಇಂದಿನ ತನಕವೂ ನಗರದಲ್ಲಿ ಕಳ್ಳತನ ಪ್ರಕರಣಗಳ ಭಾರೀ ಸಂಖ್ಯೆ ಇಳಮುಖವಾಗಿತ್ತು. ಬುಧವಾರ ರಾತ್ರಿಯೂ ಕೂಡ ಕಳ್ಳರು ಸಿಸಿ ಟಿವಿ ಸಂಪರ್ಕ ಕಡಿತಗೊಳಿಸಿದ ಕೂಡಲೇ ಲೈವ್ ವೀಕ್ಷಣೆ ಮಾಡುತ್ತಿದ್ದ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಹೀಗಾಗಿ ತಕ್ಷಣ ಪೊಲೀಸರು ಎಚ್ಚೆತ್ತುಕೊಂಡಿದ್ದರಿಂದ ಕಳವಾಗಬಹುದಾದ ಭಾರೀ ಮೊತ್ತದ ಬೆಳ್ಳಿ ಆಭರಣ ಸೇಫ್ ಆಗಿದೆ.

ಗುರುವಾರ ಬೆಳಿಗ್ಗೆ ಕುಂದಾಪುರ ಉಪವಿಭಾಗದ ಎಎಸ್‍ಪಿ ಹರಿರಾಮ್ ಶಂಕರ್, ಸಿಪಿಐ ಗೋಪಿಕೃಷ್ಣ, ಪಿಎಸ್‍ಐ ಹರೀಶ್ ಆರ್ ನಾಯ್ಕ್ ಹಾಗೂ ಕ್ರೈಂ ಪಿಎಸ್‍ಐ ಪವಾರ್ ಸ್ಥಳಕ್ಕಾಗಮಿಸಿ ಮಾಹಿತಿ ಕಲೆಹಾಕಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.