ವಿರೋಧ ಪಕ್ಷದವರು ನಿದ್ದೆ ಮಾಡಿಕೊಂಡೇ ಇರುವ ಸಿಂಹವನ್ನು ನಂಬಿಕೊಂಡಿರುವ ಸಂಸ್ಕೃತಿಯವರು: ಬಸವರಾಜ ಬೊಮ್ಮಾಯಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಕ್ರಿಯಾಶೀಲರಾಗಿದ್ದಾರೆ, ಅದಕ್ಕೆ ತಕ್ಕ ಹಾಗೆ ಸಶಕ್ತ ಹಾಗೂ ಘರ್ಜಿಸುವ ರೂಪದಲ್ಲಿ ನಮ್ಮ ರಾಷ್ಟ್ರದ ಸಿಂಹ ಲಾಂಛನ ಇದೆ. ಆದರೆ ವಿರೋಧ ಪಕ್ಷದವರು ನಿದ್ದೆ ಮಾಡಿಕೊಂಡೇ ಇರುವ ಸಿಂಹವನ್ನು ನಂಬಿಕೊಂಡಿರುವ ಸಂಸ್ಕೃತಿಯವರು. ಸಿಂಹ ಲಾಂಛನದ ಬಗ್ಗೆ ಕಾಂಗ್ರೆಸ್ ಪಕ್ಷ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತ್ಯುತ್ತರ ನೀಡಿದರು.

ಸಿಂಹದ ಲಾಂಛನ ಉಗ್ರವಾಗಿದೆ, ವ್ಯಗ್ರವಾಗಿದೆ ಎನ್ನುವುದು ನೋಡುವವರ ದೃಷ್ಟಿಕೋನವಾಗಿದೆ. ಕಾಂಗ್ರೆಸ್ ನವರು ಈ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡುತ್ತಿದ್ದಾರೆ. ಭಾರತಕ್ಕೆ ಈಗ ಕ್ರಿಯಾಶೀಲವಾಗಿರುವ, ಚುರುಕಾಗಿರುವ ಪ್ರಧಾನಮಂತ್ರಿಗಳಿದ್ದಾರೆ. ಅದಕ್ಕೆ ತಕ್ಕಹಾಗೆ ನಮ್ಮ ದೃಷ್ಟಿಯಲ್ಲಿ ಸಿಂಹ ಸಶಕ್ತರೂಪವಾಗಿದೆ. ಆದರೆ ಕಾಂಗ್ರೆಸ್ ನವರು ನಿದ್ದೆ ಮಾಡಿಕೊಂಡೇ ಇದ್ದಂತಹ ಸಿಂಹವನ್ನು ನಂಬಿಕೊಂಡು ಬಂದವರು. ಆದ್ದರಿಂದ ಅವರಿಗೆ ಹಾಗೆ ಅನಿಸುತ್ತದೆ. ಹೊಸ ಸಂಸತ್ ಭವನದ ಮೇಲೆ ರಾಷ್ಟ್ರೀಯ ಲಾಂಛನಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುತ್ತಿರುತ್ತಾರೆ. ಹೊಸ ಸಂಸತ್ ಭವನದ ಮೇಲೆ ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನದ ಮುಖಚರ್ಯೆ ಬದಲಾವಣೆಯಿಂದಾಗುತ್ತಿರುವ ಪರ-ವಿರೋಧ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸಾಮ್ರಾಟ ಅಶೋಕರ ಕಾಲದಲ್ಲಿದ್ದ ಸಿಂಹದ ಲಾಂಛನ ಮತ್ತು ಅಶೋಕ ಚಕ್ರದ ಲಾಂಛನವನ್ನೇ ಅಳವಡಿಸಿಕೊಳ್ಳಲಾಗಿದೆ ಎಂದರು.