ಎಪಿಎಂಸಿ ಜಾಗ ಮಾರಾಟ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ವಲಸೆ ಕಾರ್ಮಿಕರ ಸಂಘ

ಉಡುಪಿ: ಆದಿ ಉಡುಪಿಯಲ್ಲಿರುವಂತಹ ಮಾರುಕಟ್ಟೆ ಕೃಷಿಕರು ಉತ್ಪಾದನೆ ಮಾಡಿದ ಬೆಳೆಗಳನ್ನು ಮಾರಾಟ ಮಾಡುವಂತಹ ಸ್ಥಳ. ಇದು ಸರಕಾರ ಮತ್ತು ಚುನಾಯಿತ ಜನಪ್ರತಿನಿಧಿಗಳ ಸಮಿತಿಯ ಮುಖಾಂತರ ಆಡಳಿತವಾಗುವಂತಹದ್ದು. ಇದುವರೆಗೂ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದ್ದು ಇತ್ತೀಚಿನ ದಿನಗಳಲ್ಲಿ ಅದನ್ನು ಲೀಸ್ ಕಮ್ ಸೇಲ್ ವ್ಯವಸ್ಥೆಯಡಿಯಲ್ಲಿ 4 ಸೆನ್ಸ್ ಜಾಗವನ್ನು 11 ಭಾಗಗಳಾಗಿ ಒಟ್ಟು 54 ಸೆನ್ಸ್ ಜಾಗ ಮಾರಾಟ ಮಾಡಿರುವ ಘಟನೆ ನಡೆದಿದ್ದು ತುಂಬಾ ಬೇಸರವಾಗಿದೆ.

ಇದು ವರ್ತಕರಿಗೆ ಹಾಗೂ ಕೃಷಿಕರಿಗೆ ಮೀಸಲಿರುವ ಜಾಗ ಮುಂದಿನ ದಿನಗಳಲ್ಲಿ ಎಪಿಎಂಸಿಯ ಜಾಗ ಅಗತ್ಯವಿರುತ್ತದೆ. ಆದರೆ ಯಾರೋ ಬಂದು ಅದನ್ನು ಕಬ್ಜಾ ಮಾಡುವ ರೀತಿ ನಡೆಯುತ್ತಿದೆ. ಆದಿ ಉಡುಪಿ ಪರಿಸರದಲ್ಲಿ ಒಂದು ಸೆನ್ಸ್ ಗೆ 5 ರಿಂದ 8 ಲಕ್ಷ ರೂ ಇದ್ದು, ಜಾಗವನ್ನು ಎಪಿಎಂಸಿ ಅಧಿಕಾರಿಗಳು ಕೇವಲ 1.63 ಲಕ್ಷಕ್ಕೆ ಮಾರಾಟ ಮಾಡಿದ್ದರಿಂದ ಸರಕಾರಕ್ಕೆ ಕೋಟ್ಯಾಂತರ ರೂಪಾಯಿ ಹಣ ನಷ್ಟವಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದ್ದರೆ ತನಿಖೆ ನಡೆಯಬೇಕು ಮತ್ತು ಜಾಗ ಮಾರಾಟವಾಗದಂತೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ವಲಸೆ ಕಟ್ಟಡ ಕಾರ್ಮಿಕರ ಸಂಘವು ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.

ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಯವರು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಲಸೆ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಸಂಗಪ್ಪ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.