ಮತ್ಸ್ಯ ಸಂಪದ ಯೋಜನೆ ಆತ್ಮನಿರ್ಭರ ಭಾರತದತ್ತ ದಿಟ್ಟ ಹೆಜ್ಜೆ: ಬಿಜೆಪಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿರುವ ಮತ್ಸ್ಯ ಸಂಪದ ಯೋಜನೆ ಆತ್ಮನಿರ್ಭರ ಭಾರತದತ್ತ ದಿಟ್ಟ ಹೆಜ್ಜೆಯಾಗಿದೆ ಎಂದು ಜಿಲ್ಲಾ ಬಿಜೆಪಿ ಹೇಳಿದೆ.

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ವಿನೂತನ ಯೋಜನೆ ಜಾರಿಯಾಗಿರುವುದು ಮೀನುಗಾರಿಕಾ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬಲಿದೆ. ಇದರ ಪರಿಣಾಮವಾಗಿ ಕ್ಷೇತ್ರದ ಮೂಲಸೌಕರ್ಯ ಹಾಗೂ ರಫ್ತು ವೃದ್ಧಿಯ ಜೊತೆಗೆ ಆಧುನಿಕ ಸಲಕರಣೆ, ಹೊಸ ಮಾರುಕಟ್ಟೆಗಳು ಲಭ್ಯವಾಗಲಿದೆ.

ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಣೆಗೊಳ್ಳಲಿರುವ ಮತ್ಸ್ಯ ಸಂಪದ ಯೋಜನೆ ವಿಪುಲ ಉದ್ಯೋಗಾವಕಾಶಗಳ ಜೊತೆಗೆ ದೇಶದ ಆರ್ಥಿಕತೆಗೂ ಒತ್ತು ನೀಡಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ ಮತ್ತು ಗಿರೀಶ್ ಎಂ. ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.