ಹೋಂ ಕ್ವಾರಂಟೈನ್ ಉಲ್ಲಂಘನೆ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ತಂಡ ರಚನೆ

ಉಡುಪಿ ಜೂನ್ 6: ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ವಿಧಿಸಿದ್ದ ಲಾಕ್ ಡೌನ್ ಆದೇಶ ಸಡಿಲವಾದ ನಂತರ , ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದ ಸಾರ್ವಜನಿಕರು ತಮ್ಮ ರಾಜ್ಯಗಳಿಗೆ ತೆರಳು ಅನುಮತಿ ನೀಡಿದ್ದು, ಅದರಂತೆ ಉಡುಪಿ ಜಿಲ್ಲೆಗೆ ಸಹ ವಿವಿಧ ರಾಜ್ಯಗಳಿಂದ ಸಾವಿರಾರು ಸಂಖ್ಯೆಯ ನಾಗರೀಕರು ಅಗಮಿಸುತ್ತಿದ್ದಾರೆ. ಇವರನ್ನು ಕ್ವಾರಂಟೈನ್ ಮಾಡಲು ಸರ್ಕಾರದ ಸೂಚನೆಯಿದ್ದು, ಈ ರೀತಿ ಕ್ವಾರಂಟೈನ್ ನಲ್ಲಿರುವವರು, ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿದ್ದು, ಇಂತಹವರನ್ನು ಗುರುತಿಸಿ, ಅವರ ವಿರುದ್ದ ಎಫ್.ಐ.ಆರ್. ದಾಖಲಿಸಲು, ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕ ಪ್ಲೈಯಿಂಗ್ ಸ್ಕ್ವಾಡ್ ತಂಡವನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ರಚಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಯಾವುದೇ ಅಕ್ರಮಗಳು, ನೀತಿ ಸಂಹಿತೆ ಉಲ್ಲಂಘನೆ ಮಾಹಿತ ಬಂದಲ್ಲಿ ತಕ್ಷಣವೇ ಸ್ಥಳಕ್ಕೆ ತೆರಳಿ, ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು, ಸಂಬಂದಪಟ್ಟವರ ಪ್ರಕರಣ ದಾಖಲಿಸುತ್ತಿದ್ದ ಮಾದರಿಯಲ್ಲಿಯೇ, ಜಿಲ್ಲೆಗೆ ಹೊರರಾಜ್ಯದಿಂದ ಬಂದು, ಹೋಂ ಕ್ವಾರಂಟೈನ್ ನಲ್ಲಿದ್ದು ನಿಯಮ ಮೀರಿ ಹೊರಗಡೆ ತಿರುಗಾಡುತ್ತಿರುವವರ ಕುರಿತು ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ, ಅವರ ವಿರುದ್ದ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲು ಮಾಡುವುದರ ಜೊತೆಗೆ ಅವರನ್ನು ಪುನಃ ಸಾಂಸ್ಥಿಕ ಕ್ವಾರಂಟೈನ್ ಒಳಪಡಿಸುವ ಕಾರ್ಯ ಮಾಡುವ ಈ ತಂಡದ ಅಧಿಕಾರಿಗಳು, ಪ್ರತಿ ದಿನ ತಮ್ಮ ವ್ಯಾಪ್ತಿಯಲ್ಲಿನ ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು ಮನೆಯಲ್ಲಿರುವ ಕುರಿತು ಪರಿಶೀಲನೆ ಮಾಡುವುದರ ಜೊತೆಗೆ , ತಮ್ಮ ವ್ಯಾಪ್ತಿಯಲ್ಲಿನ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೆ ಸಹ ಭೇಟಿ ಪರಿಶೀಲನೆ ನಡೆಸಲಿದ್ದಾರೆ.

ಉಡುಪಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು, ಉಡುಪಿ ನಗರಸಭೆ, ಉಡುಪಿ ತಾಲೂಕು ಪಂಚಾಯತ್ ವ್ಯಾಪ್ತಿಯ ಗ್ರಾಮಗಳು, ಕಾಪು ತಾಲೂಕು, ಬ್ರಹ್ಮಾವರ ತಾಲೂಕು, ಕಾರ್ಕಳ ತಾಲೂಕು, ಹೆಬ್ರಿ ತಾಲೂಕು, ಬೈಂದೂರು ಹೋಬಳಿ, ಕುಂದಾಪುರ ಹೋಬಳಿ, ವಂಢ್ಸೆ ಹೋಬಳಿ ವ್ಯಾಪ್ತಿಗೆ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಯಾವುದೇ ಕಾರಣಕ್ಕೂ ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳಿಂದ ಕ್ವಾರಂಟೈನ್ ನಿಯಮ ಉಲ್ಲಂಘನೆಗೆ ಅವಕಾಶ ನೀಡದಂತೆ ಕಾರ್ಯ ನಿರ್ವಹಿಸಲು ಸೂಚಿಸಲಗಿದೆ.

ಅಲ್ಲದೇ ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳ ಬಗ್ಗೆ, ಕ್ವಾರಂಟೈನ್ ಮೊಬೈಲ್ ವಾಚ್ ಆಪ್ ಮೂಲಕ , ಸಂಬಂದಪಟ್ಟ ವ್ಯಾಪ್ತಿಯ ಪಿಡಿಓ ಮತ್ತು ಗ್ರಾಮ ಕರಣಿಕರು ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳ ಮನೆಗೆ, ಪ್ರತಿದಿನ ಭೇಟಿ ನೀಡಿ, ಮೊಬೈಲ್ ನಲ್ಲಿ ಫೋಟೋ ತೆಗೆದು ಅಪ್ ಲೋಡ್ ಮಾಡಬೇಕಿದ್ದು, ಈ ಕಾರ್ಯವು ವ್ಯವಸ್ಥಿತವಾಗಿ ನಡೆಯುತ್ತಿರುವ ಬಗ್ಗೆ ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಪರಿಶೀಲಿಸಿದ್ದಾರೆ.