ಉಡುಪಿ: ಮನೆಯವರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ ಪೆರ್ಡೂರು ಮೇಳದ ಪ್ರಸಿದ್ಧ ಯಕ್ಷಗಾನ ಕಲಾವಿದ ಕಡಬಾಳ ಉದಯ ಹೆಗಡೆ ಅವರು ಇದೀಗ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಯಡಾಡಿ-ಮತ್ಯಾಡಿ ಗ್ರಾಮದ ಗುಡ್ಡೆಯಂಗಡಿ ಪ್ರಧಾನ ನಗರದಲ್ಲಿ ವಾಸವಾಗಿದ್ದ ಹೆಗಡೆಯವರು ಎ.21 ರಂದು ಸಂಜೆ ಸುಮಾರು 6ಗಂಟೆಗೆ ಮನೆಯಿಂದ ಯಕ್ಷಗಾನ ಪ್ರದರ್ಶನಕ್ಕೆಂದು ತೆರಳಿದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದರು.
ಇದರಿಂದ ಭಯಗೊಂಡ ಕಡಬಾಳರ ಪತ್ನಿ ಅಶ್ವಿನಿ ಹೆಗಡೆ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರಿಗೆ ಉದಯ ಹೆಗಡೆಯವರು ಬೆಂಗಳೂರಿನ ಸಂಬಂಧಿಯ ಮನೆಯಲ್ಲಿ ವಾಸವಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ನಾಪತ್ತೆಗೆ ಕಾರಣ ಏನು ಎಂಬುವುದು ತಿಳಿದುಬಂದಿಲ್ಲ.












