ಬಿಸಿಯೂಟ ಅಡುಗೆ ಸಿಬ್ಬಂದಿಗಳಿಗೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟ ತಯಾರಿಕೆಯ ಅಡುಗೆ ಸಿಬ್ಬಂದಿಗಳಿಗೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಅದರಲ್ಲಿ ಏಪ್ರಾನ್, ತಲೆಗವಸು, ಕೈಗವರು ಧರಿಸಲು ಸೂಚಿಸಿದೆ. ಅಲ್ಲದೇ ಅಡುಗೆ ಸಿಬ್ಬಂದಿಗಳು ಬಳೆ ತೊಡದಂತೆ ಸೂಚಿಸಲಾಗಿದೆ.

ಶಿಕ್ಷಣ ಇಲಾಖೆಯಿಂದ ಮಧ್ಯಾಹ್ನದ ಬಿಸಿಯೂಟದಲ್ಲಿ ನೈರ್ಮಲ್ಯ, ಸ್ವಚ್ಛತೆ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಬಿಸಿಯೂಟ ಸಿಬ್ಬಂದಿಯು ಪಾಲಿಸಬೇಕಾದ ನಿಯಮಗಳ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

ಬಿಸಿಯೂಟ ಅಡುಗೆ ಸಿಬ್ಬಂದಿಗಳಿಗೆ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಅಡುಗೆ ಸಿಬ್ಬಂದಿ ಏಪ್ರಾನ್, ತಲೆಗವಸು ಮತ್ತು ಕೈಗವಸುಗಳನ್ನು ಧರಿಸಬೇಕು. ಕೈಗಳಲ್ಲಿ ಬಳೆಗಳನ್ನು ತೊಟ್ಟಿರಬಾರದು ಎಂಬುದಾಗಿ ಸೂಚಿಸಲಾಗಿದೆ. ಇದು ಮಹಿಳೆಯರ ಅಸಮಾಧಾನಕ್ಕೂ ಕಾರಣವಾಗಿದೆ.

ಇದಲ್ಲದೇ ಅಡುಗೆ ಕೋಣೆ ಸ್ವಚ್ಛ ಹಾಗೂ ಧೂಳು ರಹಿತವಾಗಿ ಇರುವಂತೆ ನೋಡಿಕೊಳ್ಳಬೇಕು. ಶುದ್ಧ ನೀರಿನಲ್ಲಿ ಪಾತ್ರೆ ಪರಿಕರಗಳನ್ನು ತೊಳೆಯಬೇಕು. ಗೋಡೆ ಮತ್ತು ಕಿಟಕಿ ಹಲ್ಲಿ, ಜೇಡ, ಜಿರಲೆ, ನೊಣಗಳಿಂದ ಮುಕ್ತವಾಗಿರಬೇಕು. ಆಹಾರ ಧಾನ್ಯಗಳಲ್ಲಿ ಕ್ರಿಮಿ, ಕೀಟಗಳು ಇಲ್ಲದಿರುವುದನ್ನು ನೋಡಿಕೊಂಡು ಅಡುಗೆಗೆ ಬಳಕೆ ಮಾಡುವಂತೆ ತಿಳಿಸಲಾಗಿದೆ.

ಸಿದ್ಧಪಡಿಸಿದ ಆಹಾರದ ಪಾತ್ರೆಗಳನ್ನು ಸುರಕ್ಷಿತವಾಗಿ ಮುಚ್ಚಿಡಬೇಕು. ಹಸಿ ಸೊಪ್ಪು ತರಕಾರಿಗಳನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆದು ಸಾಂಬಾರ್ ಮಾಡಬೇಕು. ಸಿದ್ಧಪಡಿಸಿದ ಆಹಾರ ವಿತರಿಸುವ ಮುನ್ನ ಶುಚಿ-ರುಚಿ ಪರೀಕ್ಷಿಸಿ ಅ ಭಿಪ್ರಾಯ ದಾಖಲಿಸುವಂತೆಯೂ ತಿಳಿಸಲಾಗಿದೆ.