ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಉಭಯ ಪಡೆಗಳ ನಿರ್ಧಾರ

ಬೀಜಿಂಗ್: ಗಡಿಯಲ್ಲಿ ಉದ್ಭವಿಸಿರುವ ಯುದ್ಧದ ಸ್ಥಿತಿಯನ್ನು ತಣ್ಣಗಾಗಿಸಲು ಭಾರತ ಹಾಗೂ ಚೀನಾದ ಸೇನಾಪಡೆಗಳು ಮುಂದಾಗಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ.
ಎರಡೂ ಕಡೆಗಳ ಉದ್ವಿಗ್ನತೆ ಶಮನ ಮಾಡುವ ಉದ್ದೇಶದಿಂದ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಹಾಗೂ ಟಿಬೆಟ್‌ನ ಮೇಜರ್ ಜನರಲ್ ಲು ಲಿನ್ ನಡುವೆ  ಸೋಮವಾರ ಸುದೀರ್ಘ 11 ಗಂಟೆ ಮಾತುಕತೆ ನಡೆದಿದೆ ಎನ್ನಲಾಗಿದೆ.
ಜೂನ್ 22ರಂದು ನಡೆದ ಕಮಾಂಡರ್ ಹಂತದ ಮಾತುಕತೆಯಲ್ಲಿ ಪರಸ್ಪರರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಗಿತ್ತು.
‘ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಮೂಡಿದ್ದ ಒಮ್ಮತದ ನಿರ್ಧಾರ ಆಧರಿಸಿ, ಎರಡೂ ಕಡೆಯವರು ಸಮಗ್ರ ಅಭಿಪ್ರಾಯಗಳನ್ನು ಹಂಚಿಕೊಂಡರು. ಪರಿಸ್ಥಿತಿಯನ್ನು ತಣ್ಣಗಾಗಿಸುವ ಕ್ರಮ ತೆಗೆದುಕೊಳ್ಳಲು ಒಪ್ಪಿಕೊಳ್ಳಲಾಯಿತು’ ಎಂದು ವರದಿಯಾಗಿದೆ.