ಕೈಗಾರಿಕಾ ಕ್ಷೇತ್ರದಲ್ಲಿ ದೇಶ ಹಿಂದೆಂದೂ ಕಾಣದ ಪ್ರಗತಿಯನ್ನು ಸಾಧಿಸಿದೆ: ಲಾಲಾಜಿ ಆರ್ ಮೆಂಡನ್

ಉಡುಪಿ: ದೇಶದಲ್ಲಿ ಈ ಹಿಂದೆ ಶೇ. 70 ರಷ್ಟು ಯುದ್ಧ ಸಾಮಾಗ್ರಿಗಳ ಬಿಡಿ ಭಾಗಗಳನ್ನು ನಾವು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ಸೇನಾ ಸಾಮಾಗ್ರಿಗಳು ಹಾಗೂ ಇತರ ಕೈಗಾರಿಕಾ ಬಿಡಿ ಭಾಗಗಳನ್ನು ಭಾರತೀಯ ಕೈಗಾರಿಕಾ ಸಂಸ್ಥೆಗಳೇ ತಯಾರಿಸುತ್ತಿರುವುದು ಕೈಗಾರಿಕಾ ಕ್ಷೇತ್ರದಲ್ಲಿ ದೇಶವು ಪ್ರಗತಿಯತ್ತ ಸಾಗುತ್ತಿರುವುದನ್ನು ತಿಳಿಸುತ್ತಿದೆ ಎಂದು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು.

ಅವರು ಸೋಮವಾರ ತಂತ್ರಜ್ಞಾನ ಕೇಂದ್ರಗಳಾಗಿ ಉನ್ನತೀಕರಿಸಿರುವ 150 ಐ.ಟಿ.ಐ ಗಳ ಲೋಕಾರ್ಪಣೆ ಯೋಜನೆಯನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವರ್ಚುವಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೈಗಾರಿಕಾ ಕ್ಷೇತ್ರಕ್ಕೆ ಬೇಕಾದ ಬೆಂಬಲವನ್ನು ಸರ್ಕಾರ ಈಗಾಗಲೇ ನೀಡುತ್ತಿದ್ದು, ಜಿಲ್ಲೆಯ ಸರ್ಕಾರಿ ಕೈಗಾರಿಕಾ ಸಂಸ್ಥೆಗೆ ಇನ್ನೂ ಹೆಚ್ಚಿನ ಆಧುನಿಕ ಸೌಕರ್ಯಗಳು ಬೇಕಾಗಿದ್ದು, ಸರಕಾರದಿಂದ ದೊರಕಿಸಿಕೊಡುವ ಭರವಸೆ ನೀಡಿದರು.

ಕೈಗಾರಿಕಾ ತರಬೇತಿ ಕ್ಷೇತ್ರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಮಾಹಿತಿಯ ಕೊರತೆ ಇದ್ದು, ಈ ಕ್ಷೇತ್ರಕ್ಕೆ ಅಧ್ಯಯನ ಮಾಡಲು ಬರುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಅರಿವು ಮೂಡಿಸುವುದು ಅನಿವಾರ್ಯವಾಗಿದೆ. ವಿದ್ಯಾಭ್ಯಾಸ ಮುಗಿಸಿದ ಕೂಡಲೇ ಉದ್ಯೋಗ ದೊರೆಯುವ ಕ್ಷೇತ್ರದಲ್ಲಿ ಇದೂ ಒಂದಾಗಿದೆ.

ಪ್ರಸ್ತುತ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಐ.ಟಿ.ಐ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ ಎಂದ ಅವರು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವಲ್ಲಿ ಅನುಕೂಲವಾಗಲೆಂದು ಅನೇಕ ಯೋಜನೆಗಳನ್ನು ಸರಕಾರ ರೂಪಿಸಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಸರಕಾರಿ ಕೈಗಾರಿಕಾ ಸಂಸ್ಥೆಯ ಸದಸ್ಯ ಗುಜ್ಜಾಡಿ ಪ್ರಭಾಕರ ನಾಯಕ್, ವಿಶ್ವನಾಥ ಭಟ್, ರಾಮಕೃಷ್ಣ ಪೈ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಜಗದೀಶ್ ಸ್ವಾಗತಿಸಿ, ಸತೀಶ್ ನಿರೂಪಿಸಿ, ಶಿಕ್ಷಕಿ ಅನಿತಾ ವಂದಿಸಿದರು.