ಕಾಂಗ್ರೆಸ್ ನಿಂದ ಬರುವುದಕ್ಕೆ ಬಿಜೆಪಿಯವರು ಹಣದ ಆಫರ್‌ ಕೊಟ್ಟಿದ್ದು ನಿಜ: ಶ್ರೀಮಂತ ಪಾಟೀಲ

ಬೆಳಗಾವಿ: ನಾನು ಕಾಂಗ್ರೆಸ್‌ನಿಂದ ಬರುವುದಕ್ಕೆ ಬಿಜೆಪಿಯವರು ಹಣದ ಆಫರ್‌ ಕೊಟ್ಟಿದ್ದು ನಿಜ ಎಂದು ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ ಸ್ಫೋಟಕ ಹೇಳಿಕೆ ನೀಡಿದ್ದಾರೆ‌.

ಕಾಗವಾಡ ತಾಲ್ಲೂಕಿನ ಐನಾಪೂರದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಎಷ್ಟು ಹಣ ಬೇಕೆಂದು ಕೇಳಿದ್ದರು. ಒಂದು ಪೈಸೆಯನ್ನೂ ಪಡೆಯುವುದಿಲ್ಲ, ಸರ್ಕಾರ ಬಂದ ನಂತರ ಒಳ್ಳೆಯ ಸ್ಥಾನಮಾನ ಕೊಡಿ ಚೆನ್ನಾಗಿ ನಿರ್ವಹಿಸಿ ಜನಸೇವೆ ಮಾಡುತ್ತೇನೆ ಎಂದು ಹೇಳಿದ್ದೆ ಎಂದರು.

ಹಣ ಪಡೆಯದೆ ಬಿಜೆಪಿ ಸೇರಿದ್ದೇನೆ. ಯಾವ ಕಾರಣದಿಂದ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಕೊಟ್ಟಿಲ್ಲವೋ ಗೊತ್ತಿಲ್ಲ. ಮುಂದಿನ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆದಾಗ ಖಂಡಿತವಾಗಿಯೂ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.