ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಂ ಇಂಡಿಯಾ: ಭಾರತ- ಆಸ್ಟ್ರೇಲಿಯಾ ಟೆಸ್ಟ್‌ ಚಾಂಪಿಯನ್‌ಶಿಪ್‌

ಲಂಡನ್​: ಲಂಡನ್‌ನ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಭಾರತ ಟಾಸ್ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಇತ್ತೀಚಿನ ವರದಿಯಂತೆ ಆಸೀಸ್ ತಂಡ 5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 13 ರನ್‌ ಗಳಿಸಿ ಆಡುತ್ತಿದೆ.ಬಹುನೀರೀಕ್ಷಿತ 2021-23 ರ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ.

ಪ್ರತಿಷ್ಟಿತ​ ಪಂದ್ಯಕ್ಕೆ ಓವಲ್​ ಮೈದಾನ ಆತಿಥ್ಯ ವಹಿಸಿದೆ. ಟಾಸ್ ಗೆದ್ದ ಭಾರತ ತಂಡ ಬೌಲಿಂಗ್​ ಆಯ್ದುಕೊಂಡಿದೆ. ಒಡಿಶಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ರೈಲು ದುರಂತದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇನ್ನು, ಭಾರತದ ವೇಗಿ ಮಹಮ್ಮದ್ ಸಿರಾಜ್‌ ದಾಳಿಗೆ ಆಸೀಸ್‌ನ ಉಸ್ಮಾನ್ ಖವಾಜ ವಿಕೆಟ್‌ ಒಪ್ಪಿಸಿದ್ದಾರೆ. ಡೇವಿಡ್‌ ವಾರ್ನರ್‌ ಮತ್ತು ಮಾರ್ನಸ್ ಲಾಬುಶಾನೆ ಕ್ರೀಸ್‌ನಲ್ಲಿದ್ದಾರೆ.

ಭಾರತ ತಂಡ ಈ ಪಿಚ್​ನಲ್ಲಿ ಓರ್ವ ಸ್ಪಿನ್ನರ್​ಗೆ ಮಾತ್ರ ಮಣೆ ಹಾಕಿದೆ. ಆರ್‌. ಅಶ್ವಿನ್ ಸ್ಥಾನ ಅನುಮಾನ ಎಂದೇ ಹೇಳಲಾಗುತ್ತಿತ್ತು. ಅದು ನಿಜವಾಗಿದೆ. ಬೌಲಿಂಗ್ ಆಲ್​ರೌಂಡರ್​ಗಳಲ್ಲಿ ಜಡೇಜಾ ಮತ್ತು ಶಾರ್ದೂಲ್​ಗೆ 11ರ ಬಳಗದಲ್ಲಿ ಅವಕಾಶ ಸಿಕ್ಕಿದೆ. ನಾಲ್ವರು ವೇಗಿಗಳೊಂದಿಗೆ ರೋಹಿತ್​ ಶರ್ಮಾ ಕಾಂಗರೂ ಪಡೆಯನ್ನು ಕಟ್ಟಿ ಹಾಕಲು ರಣತಂತ್ರ ರೂಪಿಸಿದ್ದಾರೆ.
18 ತಿಂಗಳ ನಂತರ ತಂಡಕ್ಕೆ ಆಯ್ಕೆಯಾದ ಅಜಿಂಕ್ಯ ರಹಾನೆಯ ಸ್ಥಾನ ಭದ್ರವಾಗಿತ್ತು. ಅಂತೆಯೇ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿ ನೀಡಲಾಗಿದೆ. ಜಡೇಜಾರನ್ನು ಬಿಟ್ಟು ಬೇರೆ ಎಡಗೈ ಬ್ಯಾಟರ್​ಗಳಿಲ್ಲ. ಹೀಗಾಗಿ, ಇಶಾನ್​ ಕಿಶನ್​ ಭರತ್ ಬದಲಿಗೆ ಆಡಬಹುದು ಎಂದು ಹೇಳಲಾಗುತ್ತಿತ್ತು.

ಆದರೆ ಬಾರ್ಡರ್​- ಗವಾಸ್ಕರ್​ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ ಶ್ರೀಕರ್ ​ಭರತ್​ ಕೀಪಿಂಗ್​ ಅವಕಾಶ ಸಿಕ್ಕಿದೆ.

ಎದುರಾಳಿ ತಂಡವೂ ಅನುಭವಿ ನಾಥನ್​ ಲಯಾನ್​ ಅವರನ್ನು ಮಾತ್ರ ಸ್ಪಿನ್​ ಬಳಗಕ್ಕೆ ಸೇರಿಸಿಕೊಂಡಿದೆ. ಮಿಕ್ಕಂತೆ ಅನುಭವಿ ವೇಗದ ಬೌಲರ್​ಗಳಾದ ಪ್ಯಾಟ್ ಕಮಿನ್ಸ್​, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್ ಆಸಿಸ್​ ಪಡೆಯಲ್ಲಿದ್ದಾರೆ.
ಟಾಸ್ ನಂತರ ರೋಹಿತ್ ಶರ್ಮಾ ಮಾತನಾಡಿ, “ನಾವು ಬೌಲಿಂಗ್ ಮಾಡಲಿದ್ದೇವೆ. ಮೋಡ ಕವಿದ ವಾತಾವರಣವಿದೆ. ಪಿಚ್ ಹೆಚ್ಚು ಬದಲಾಗುವುದಿಲ್ಲ. ನಾಲ್ವರು ಸೀಮರ್‌ಗಳು ಮತ್ತು ಒಬ್ಬ ಸ್ಪಿನ್ನರ್​​ ತಂಡದಲ್ಲಿದ್ದಾರೆ. ಇದು ಯಾವಾಗಲೂ ತಂಡಕ್ಕೆ ಕಠಿಣವಾಗುವ ನಿರ್ಧಾರ.

ಆದರೂ ಅಶ್ವಿನ್​ ಅವರನ್ನು ಕೈಬಿಡಲಾಗಿದೆ. ಅವರು ಮ್ಯಾಚ್ ವಿನ್ನರ್ ಆಗಿದ್ದಾರೆ. 80 ಬೆಸ್ಟ್​ ಟೆಸ್ಟ್​ಗಳನ್ನು ಆಡಿರುವ ಅಜಿಂಕ್ಯ ರಹಾನೆ ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ಅನುಭವ ತರುತ್ತಾರೆ” ಎಂದರು.

ಉಭಯ ತಂಡಗಳು ಇಂತಿವೆ..: ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್​ ಕೀಪರ್​​), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

ಆಸ್ಟ್ರೇಲಿಯಾ : ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್​, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್​​ ಕೀಪರ್​), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಯಾನ್, ಸ್ಕಾಟ್ ಬೋಲ್ಯಾಂಡ್ಪ್ಯಾ
ಟ್ ಕಮಿನ್ಸ್ ಪ್ರತಿಕ್ರಿಯಿಸಿ, “ನಾವು ಟಾಸ್​ ಗೆದ್ದರೆ ಮೊದಲು ಬೌಲಿಂಗ್ ಮಾಡುತ್ತಿದ್ದೆವು. ಆಶಾದಾಯಕವಾಗಿ ನಾಲ್ಕು ಮತ್ತು ಐದನೇ ದಿನ ಸ್ವಲ್ಪ ಸ್ಪಿನ್​ಗೆ ಪಿಚ್​ ಸಹಕಾರಿಯಾಗಲಿದೆ. ಅದು ಕೊನೆಯ ದಿನಗಳಲ್ಲಿ ಬೌಲಿಂಗ್​ ಆಸ್ತ್ರವಾಗಲಿದೆ. ಕಳೆದ 10 ದಿನಗಳಿಂದ ನಾವು ಇಲ್ಲಿದ್ದೇವೆ. ಹವಾಮಾನ ಉತ್ತಮವಾಗಿದೆ” ಎಂದು ಹೇಳಿದರು.