ವಿದ್ಯಾರ್ಥಿಗಳಂತೆ ಶಿಕ್ಷಕರೂ ಸದಾ ಅಧ್ಯಯನಶೀಲರಾಗಿರಬೇಕು: ಪ್ರೊ.ಬಿ.ಪದ್ಮನಾಭ ಗೌಡ

ಕಾರ್ಕಳ: ಶಿಕ್ಷಣ ಮತ್ತು ಶಿಕ್ಷಕ ವೃತ್ತಿಗಳು ಅತ್ಯಂತ ಶ್ರೇಷ್ಠವಾದದ್ದು ವಿದ್ಯಾರ್ಥಿಗಳಲ್ಲಿ ಸದ್ಭಾವನೆಯನ್ನು ಬೆಳೆಸುತ್ತಾ, ಶಿಕ್ಷಕನೂ ಅಧ್ಯಯನ ಶೀಲನಾಗಬೇಕು. ನಿರಂತರವಾಗಿ ಗುರುತರವಾದ ಜವಾಬ್ದಾರಿಯಿಂದ ಬೋಧನೆ ಮಾಡುವವರಾಗಬೇಕು ಎಂದು ಪ್ರೊ.ಬಿ.ಪದ್ಮನಾಭ ಗೌಡ ಕರೆ ನೀಡಿದರು.
ಅವರು ಕಾರ್ಕಳದ ಕ್ರಿಯೇಟಿವ್ ಪ. ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನದ ಪ್ರಯುಕ್ತ ಆಚರಿಸಲಾದ ‘ಗುರುದೇವೋ ಭವ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೋರ್ವ ಅತಿಥಿ ಚೇತನಾ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಶೆಟ್ಟಿ ಮಾತನಾಡಿ, ಗುರುಗಳೆಂದರೆ ಅಪಾರ ಗೌರವದಿಂದ ಕಾಣಬೇಕಾದ ವ್ಯಕ್ತಿ. ಅಂತಹ ವ್ಯಕ್ತಿತ್ವಕ್ಕೆ ಜಗತ್ತಿನಲ್ಲಿ ಅಪೂರ್ವ ಮನ್ನಣೆಯಿದೆ ಎಂದರು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದಿ ಉಪನ್ಯಾಸಕ ವಿನಾಯಕ ಜೋಗ್ ಹಾಗೂ ಜೀವಶಾಸ್ತ್ರ ಉಪನ್ಯಾಸಕ ಆದಂ ಶೇಕ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಸಂಸ್ಥೆಯ ಉಪನ್ಯಾಸಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಂಸ್ಥಾಪಕ ಅಶ್ವತ್ ಎಸ್.ಎಲ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸಂಸ್ಥೆಯ ಆದರ್ಶ ಮತ್ತು ಕನಸನ್ನು ಹಂಚಿಕೊಂಡರು.
ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಸಂಸ್ಥಾಪಕ ಡಾ.ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ ಎಂ.ಕೆ, ವಿಮಲ್ ರಾಜ್ ಜಿ, ಗಣಪತಿ ಭಟ್ ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.