ಸ್ವಿಗ್ಗಿ ಸಂಸ್ಥೆ ಡೆಲಿವರಿ ಹುಡುಗರ ಮುಷ್ಕರ: ಶಾಸಕ ಕೆ. ರಘುಪತಿ ಭಟ್ ಸಂಧಾನ ಸಭೆ 

ಉಡುಪಿ: ಸ್ವಿಗ್ಗಿ ಸಂಸ್ಥೆ ಅಳವಡಿಸಿದ ಕೆಲವೊಂದು ನಿಯಮಗಳ ವಿರುದ್ಧ ಡೆಲಿವರಿ ಹುಡುಗರು ತುಳುನಾಡ ರಕ್ಷಣಾ ವೇದಿಕೆಯ ಬೆಂಬಲದೊಂದಿಗೆ ಮುಷ್ಕರ ನಡೆಸುತ್ತಿದ್ದು, ಸೆ. 03 ರಂದು ಶಾಸಕ ಕೆ. ರಘುಪತಿ ಭಟ್ ಅವರು ಸ್ವಿಗ್ಗಿ ಸಂಸ್ಥೆಯ ಅಧಿಕಾರಿಗಳು ಹಾಗೂ ಡೆಲಿವರಿ ಬಾಯ್ಸ್ ಜೊತೆ ಸಂಧಾನ ಸಭೆ ನಡೆಸಿದರು. ಸಂಸ್ಥೆಯ ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನು ಡೆಲಿವರಿ ಮಾಡುವ ಹುಡುಗರು ಸಭೆಯಲ್ಲಿ ಗಮನಕ್ಕೆ ತಂದರು. ಇದನ್ನು ಶೀಘ್ರದಲ್ಲಿ ಸರಿಪಡಿಸುವಂತೆ ಸ್ವಿಗ್ಗಿ ಸಂಸ್ಥೆಯ ಅಧಿಕಾರಿಗಳಿಗೆ ಶಾಸಕ ಕೆ. ರಘುಪತಿ ಭಟ್ ರವರು ಸೂಚಿಸಿ ಮುಷ್ಕರವನ್ನು ಕೈ ಬಿಡುವಂತೆ ಡೆಲಿವರಿ ಹುಡುಗರಲ್ಲಿ ವಿನಂತಿಸಿ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರೋಹಿತ್ ಕರಂಬಳ್ಳಿಯವರಲ್ಲಿ ಸ್ವಿಗ್ಗಿ ಸಂಸ್ಥೆಗೆ 10 ದಿನಗಳ ಕಾಲಾವಕಾಶ ನೀಡುವಂತೆ ತಿಳಿಸಿದರು. ಅದರಂತೆ ಸ್ವಿಗ್ಗಿ ಸಂಸ್ಥೆಯು 10 ದಿನಗಳಲ್ಲಿ ಬೇಡಿಕೆ ಈಡೇರಿಸದಿದ್ದಲ್ಲಿ ಸ್ವಿಗ್ಗಿ ಸಂಸ್ಥೆಯ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.

ಮಣಿಪಾಲ ಠಾಣಾಧಿಕಾರಿ ರಾಜ್ ಶೇಕರ್ ತಾಂತ್ರಿಕ ಸಮಸ್ಯೆಗಳಿಗೆ ಸಹಕಾರ ನೀಡವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಹಾರಿಸ್, ಜಿಲ್ಲಾ ಕೋಶಾಧಿಕಾರಿ ಡ್ಯಾನಿ ಬಂಗೇರ್, ಜಿಲ್ಲಾ ಕಾರ್ಯದರ್ಶಿ ಸದಾನಂದ ಜಿ. ಪುತ್ರನ್, ಸ್ವಿಗ್ಗಿ ಸಂಸ್ಥೆಯ ನೂರಾರು ಡೆಲಿವೆರಿ ಬಾಯ್ಸ್ ಉಪಸ್ಥಿತರಿದ್ದರು.