ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ‘ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ’ ಕಾರ್ಯಕ್ರಮ

ಹೆಬ್ರಿ: ವಿದ್ಯಾರ್ಥಿಗಳು ನಿಮ್ಮ ಬದುಕಿನಲ್ಲಿ ಗುರಿ ತಲುಪಬೇಕಾದರೆ ಶಿಸ್ತು ಅತೀ ಅಗತ್ಯ. ಶಿಸ್ತು, ಛಲ, ಶ್ರದ್ಧೆ, ಆಶೀರ್ವಾದ ಇವುಗಳನ್ನು ವಿದ್ಯಾರ್ಥಿಗಳು ಪಾಲಿಸಿಕೊಂಡರೆ ಯಶಸ್ಸು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಕನಸು ಕಾಣಬೇಕು ಅದನ್ನು ನನಸು ಮಾಡುವಲ್ಲಿ ಕಾರ್ಯಪ್ರವೃತ್ತರಾಗುವುದು ಅತೀ ಅಗತ್ಯ. ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶದಷ್ಟು ಬೇರೆ ಯಾವುದೇ ಹಂತದಲ್ಲಿ ಸಿಗುವುದಿಲ್ಲ. ನಮಗೆ ನಾವೇ ಗೌರವವನ್ನು, ನಂಬಿಕೆಯನ್ನು, ರೂಢಿಸಿಕೊಂಡಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂದು ಆಳ್ವಾಸ್ ಮಹಾವಿದ್ಯಾಲಯ ಮೂಡುಬಿದಿರೆಯ ಮಾನಸರೋಗ ಮತ್ತು ಮನೋವಿಜ್ಞಾನ ವಿಭಾಗದ ಮುಖ್ಯಸ್ಥರು ಮನೋವೈದ್ಯರಾದ ಡಾ.ರವಿಪ್ರಸಾದ್ ಹೆಗ್ಡೆ ಅವರು ಹೇಳಿದರು.

ಇವರು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ, ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮದಡಿ ನಡೆದ *ಬದುಕು ಬದಲಿಸಬಹುದು (ಯುವ ಮನಸ್ಸುಗಳಿಗೆ ಸ್ಫೂರ್ತಿದಾಯಕ ಮಾತು) ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್.ನಾಗರಾಜ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಬದುಕಿನಲ್ಲಿ ಹಿರಿಯರ ಮಾರ್ಗದರ್ಶನ, ಹಾರೈಕೆ, ಮೌಲ್ಯಯುತವಾದ ಮಾತುಗಳು ವಿದ್ಯಾರ್ಥಿಗಳಾದ ನಿಮ್ಮ ಬದುಕಿನಲ್ಲಿ ಉಪಯುಕ್ತ. ನಿಮ್ಮ ಈ ವಯಸ್ಸಿನಲ್ಲಿ ನಿಮಗೆ ಆರೋಗ್ಯಪೂರ್ಣವಾದ ಮಾರ್ಗದರ್ಶನ, ಹಿತವಚನ ಅತೀ ಅಗತ್ಯ ಎಂದು ಹೇಳಿದರು.

ಈ ಸಂದರ್ಭ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ಸಪ್ನಾ ಎನ್ ಶೆಟ್ಟಿ, ಎಸ್.ಆರ್. ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲರಾದ ದೀಪಕ್ ಎನ್, ಎಸ್.ಆರ್.ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕರು, ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ದೀಪಕ್ ಎನ್ ಸ್ವಾಗತಿಸಿ, ಶಿಕ್ಷಕಿ ಸುಪ್ರಿತಾ ನಿರೂಪಿಸಿ, ಭಗವತಿ ವಂದಿಸಿದರು.