ಸುರತ್ಕಲ್: ಸಂಸದ-ಶಾಸಕರ ನೇತೃತ್ವದಲ್ಲಿ ಟೋಲ್ ವಿರೋಧಿ ಹೋರಾಟ ಖಾಸಗಿ ಕಾರುಗಳಿಗೂ ಟೋಲ್ ಪಡೆದರೆ ಎಚ್ಚರಿಕೆ- ಬಿಜೆಪಿ ವಾರ್ನಿಂಗ್

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ನಲ್ಲಿ ಸ್ಥಳೀಯ ಖಾಸಗೀ ವಾಹನಗಳಿಗೂ ಟೋಲ್ ಪಡೆಯುವುದನ್ನು ಬಿಜೆಪಿ ವಿರೋಧಿಸುತ್ತದೆ. ಮಾತ್ರವಲ್ಲ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಾ.ಭರತ್ ಶೆಟ್ಟಿ ವೈ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದು ಮಂಗಳೂರು ನಗರ  ಉತ್ತರ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಅಶೋಕ್ ಕೃಷ್ಣಾಪುರ  ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗುತ್ತಿಗೆ ವಹಿಸಿಕೊಂಡ ಕಂಪನಿ ನಷ್ಟವಾಗುತ್ತಿದೆ ಎನ್ನುವುದು ಸಾರ್ವಜನಿಕರನ್ನು, ಅಧಿಕಾರಿಗಳನ್ನು ದಾರಿ ತಪ್ಪಿಸುವ ತಂತ್ರವಾಗಿದೆ. ಗುತ್ತಿಗೆ ಹಾಕುವ ಸಂದರ್ಭ  ಕಂಪನಿ ಸ್ಥಳೀಯ ಖಾಸಗೀ ವಾಹನವನ್ನು ಬಿಟ್ಟು ಮಾಹಿತಿ ಬಿಡ್ ಸಲ್ಲಿಸುತ್ತದೆ.
ಇದೀಗ ನಷ್ಟ ಎಂದರೆ ಸಾರ್ವಜನಿಕರು ಹೊಣೆಯಲ್ಲ. ಈ ಹಿಂದೆ ಇದ್ದಂತೆಯೇ ಜಿಲ್ಲಾಡಳಿತ ಸ್ಥಳೀಯ ಖಾಸಗಿ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು. ನಮ್ಮ ಸ್ಥಳೀಯರ, ಪಕ್ಷದ ಆಗ್ರಹಕ್ಕೆ ಹೆದ್ದಾರಿ ಇಲಾಖೆ, ಜಿಲ್ಲಾಡಳಿತ ಮಣಿಯದಿದ್ದಲ್ಲಿ ಉಗ್ರ ಸ್ಚರೂಪದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಮಂಗಳೂರು ನಗರ ಉತ್ತರ, ಮೂಲ್ಕಿ ಮೂಡಬಿದ್ರೆ ಬಿಜೆಪಿ ಘಟಕ ಈ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದರು.

ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜು.15ರಂದು ಸಂಜೆ 6.30ಕ್ಕೆ ಸುರತ್ಕಲ್ ಜಂಕ್ಷನ್ ನಲ್ಲಿ ಜಾಗೃತಿ ಸಭೆ, ಜು.16ರಂದು ಟೋಲ್ ಗೇಟ್ ಮುಂಭಾಗ ಪ್ರತಿಭಟನೆ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಈಶ್ವರ್ ಕಟೀಲ್ ರಜನಿ ದುಗ್ಗಣ್ಣ, ಜಯಾನಂದ ಮುಲ್ಕಿ, ಲೋಕೇಶ್ ಬೊಳ್ಳಾಜೆ, ವಿಠಲ ಸಾಲ್ಯಾನ್, ಗುರುಚಂದ್ರ ಹೆಗ್ಡೆ, ದಿವಾಕರ ಸಾಮಾನಿ, ಜಯಾನಂದ ಚೇಳಾರು, ದಿವಾಕರ ಇಡ್ಯಾ, ರಾಘವೇಂದ್ರ ಶೆಣೈ ಮತ್ತಿರರು ಉಪಸ್ಥಿತರಿದ್ದರು.