ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಯಡಿ ಸಹಾಯಧನ ಸೌಲಭ್ಯ: ಅರ್ಜಿ ಆಹ್ವಾನ

ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ ಪಡೆಯಲು ಆಸಕ್ತ ರೈತರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇಲಾಖೆಯ ವಿವಿಧ ಯೋಜನೆಗಳಡಿ ರೈತರಿಗೆ ಕಾಳುಮೆಣಸು, ಗೇರು, ಜಾಯಿಕಾಯಿ, ಅನಾನಸ್ಸು, ಅಂಗಾoಶ ಬಾಳೆ ಹಾಗೂ ಕಂದು ಬಾಳೆ, ಅಪ್ರಧಾನ ಹಣ್ಣುಗಳಾದ ರಾಂಬೂತನ್, ಡ್ರ‍್ಯಾಗನ್ ಫ್ರೂಟ್ ಹೊಸ ತೋಟಗಳ ಸ್ಥಾಪನೆಗೆ ಶೇ. 40 ರ ಸಹಾಯಧನ ಲಭ್ಯವಿದೆ. ಸಣ್ಣ ಸಸ್ಯಾಗಾರಗಳ/ ನರ್ಸರಿಗಳ ಸ್ಥಾಪನೆಗೆ ಶೇ. 50 ರ ದರದಲ್ಲಿ (ಗರಿಷ್ಠ ರೂ. 10.00 ಲಕ್ಷಗಳು) ಸಹಾಯಧನ, ಸಸ್ಯಾಗಾರಗಳ ಉನ್ನತೀಕರಣಕ್ಕಾಗಿ ಶೇ. 50 ರ ಸಹಾಯಧನದಲ್ಲಿ ಪ್ರತಿ ಹೆಕ್ಟೇರ್‌ಗೆ ರೂ. 2.00 ಲಕ್ಷಗಳಂತೆ 2.00 ಹೆಕ್ಟೇರ್ ಗೆ ರೂ. 4.00 ಲಕ್ಷಗಳ ಸಹಾಯಧನ, ಅಂಗಾoಶ ಕೃಷಿ ಘಟಕ ಸ್ಥಾಪನೆಗೆ ಶೇ.40 ರಂತೆ (ಗರಿಷ್ಠ ರೂ. 100.00 ಲಕ್ಷಗಳು) ಸಹಾಯಧನ, ನೀರು ಸಂಗ್ರಹಣ ಘಟಕ (28*27*3 ಮೀ.ಅಳತೆ) ನಿರ್ಮಾಣಕ್ಕೆ ಗರಿಷ್ಠ 0.90 ಲಕ್ಷ ರೂಪಾಯಿಗಳ ಸಹಾಯಧನ ಲಭ್ಯವಿದೆ.

ಎರೆಹುಳ ಘಟಕ ನಿರ್ಮಾಣಕ್ಕೆ ಗರಿಷ್ಠ 0.50 ಲಕ್ಷ ಸಹಾಯಧನ, ವಿವಿಧ ತೋಟಗಾರಿಕೆ ಬೆಳೆಗಳಿಗೆ ಹಾನಿಯುಂಟು ಮಾಡುವ ರೋಗ/ಕೀಟಗಳ ನಿಯಂತ್ರಣಕ್ಕಾಗಿ ಸಸ್ಯ ಸಂರಕ್ಷಣಾ ಔಷಧಿಗಳಿಗೆ ಪ್ರತಿ ಹೆ. ರೂ 1500 ಸಹಾಯಧನವಿದೆ. ಅಡಿಕೆ ತೋಟ ಹೊಂದಿರುವ ರೈತರಿಗೆ ಅಡಿಕೆ ಸಂರಕ್ಷಣೆ/ ಒಣಗಿಸಲು ಸೋಲಾರ್ ಶೀಟ್ ಖರೀದಿಗೆ ಶೇ.40 ರ ಸಹಾಯಧನ ಲಭ್ಯವಿದೆ.

ವಿವಿಧ ಜಾತಿಯ ಅಣಬೆ ಉತ್ಪಾದನೆಗಾಗಿ ಅಣಬೆ ಉತ್ಪಾದನಾ ಘಟಕ, ಸ್ಪಾನ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಶೇ. 40 ರ ಗರಿಷ್ಠ ರೂ. 8 ರಿಂದ 12.00 ಲಕ್ಷಗಳ ಸಹಾಯಧನ, ರೈತರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ವಿವಿಧ ಸಂಸ್ಥೆಗಳು ಸ್ಥಾಪಿಸುವ ಗ್ರಾಮೀಣ ಮಾರುಕಟ್ಟೆ/ರೈತ ಸಂತೆ/ನೇರ ಮಾರುಕಟ್ಟೆ ಸ್ಥಾಪಿಸಲು ಶೇ. 40 ರ ಗರಿಷ್ಠ ರೂ. 10.00 ಲಕ್ಷಗಳ ಸಾಲ ಆಧಾರಿತ ಸಹಾಯಧನ ನೀಡಲು ಅವಕಾಶವಿರುತ್ತದೆ.

ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ. 35 ರ ದರದಲ್ಲಿ (ಗರಿಷ್ಠ 12.25 ಲಕ್ಷಗಳ ವರೆಗೆ) ಸಹಾಯಧನ, ಪ್ಯಾಕ್ ಹೌಸ್‌ಗಳ ನಿರ್ಮಾಣಕ್ಕೆ ಗರಿಷ್ಠ 2.40 ಲಕ್ಷಗಳ ವರೆಗೆ ಶೇ. 50 ರ ಸಹಾಯಧನ, ರೈತರ ಯಾಂತ್ರೀಕರಣ ಅವಶ್ಯಕತೆಗೆ 20 hಠಿ ಗಿಂತ ಕಡಿಮೆ ಸಾಮರ್ಥ್ಯದ ಟ್ರ‍್ಯಾಕ್ಟರ್ ಹಾಗೂ ಟಿಲ್ಲರ್ ಖರೀದಿಗೆ ಗರಿಷ್ಠ ರೂ. 0.75 ಲಕ್ಷದವರೆಗೆ ರ ಸಹಾಯಧನ, ತೋಟಗಾರಿಕೆ ಬೆಳೆಗಳಿಗೆ ಬಳಸುವ ಪ್ಲಾಸ್ಟಿಕ್ ಹೊದಿಕೆ/ ಮಲ್ಚಿಂಗ್ ಗಳಿಗೆ ಶೇ. 50 ರ ದರದಲ್ಲಿ ಪ್ರತಿ ಹೆಕ್ಟೇರ್ ಗೆ ರೂ. 20000/- ಸಹಾಯಧನ, ತೋಟಗಳಲ್ಲಿ ಕಳೆ ನಿಯಂತ್ರಣಕ್ಕಾಗಿ ವೀಡ್ ಮ್ಯಾಟ್ ಬಳಕೆಗೆ ಶೇ. 50 ರ ಸಹಾಯಧನದಲ್ಲಿ ರೂ. 25000/- ಪ್ರತಿ ಹೆಕ್ಟೇರ್ ಗೆ ಸಹಾಯಧನ ಲಭ್ಯವಿದೆ.

ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಗಳಡಿ ಅನುಮೋದಿತ ವಿವಿಧ ಯಂತ್ರೋಪಕರಣಗಳಿಗೆ ಶೇ. 40/50 ರ ಸಹಾಯಧನ, ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಕೆಗೆ ಶೇ. 90 ರಷ್ಟು ಸಹಾಯಧನ ಲಭ್ಯವಿದ್ದು, ಸಹಾಯಧನಕ್ಕೆ ಕಛೇರಿಯಲ್ಲಿ ಅರ್ಜಿ ಸಲ್ಲಿಸಿ ಕಾರ್ಯಾದೇಶ ಪಡೆದು ಇಲಾಖೆಯಿಂದ ಅನುಮೋದಿತ ಡೀಲರ್ ಗಳ ಮೂಲಕ ರೈತರು ಹನಿ ನೀರಾವರಿ ಅಳವಡಿಸಿಕೊಂಡು ಸಹಾಯಧನ ಪಡೆಯಬಹುದಾಗಿದೆ.

ಭವಿಷ್ಯದ ಬೆಳೆಯಾದ ತಾಳೆ ಬೆಳೆಗಾಗಿ ತಾಳೆಬೆಳೆ ಯೋಜನೆಯಡಿ ಹೊಸದಾಗಿ ತಾಳೆಬೆಳೆ ಪ್ರದೇಶ ವಿಸ್ತರಣೆಗೆ ಉಚಿತ ವಿತರಣೆಯೊಂದಿಗೆ 4 ವರ್ಷಗಳ ಕಾಲ ನಿರ್ವಹಣಾ ವೆಚ್ಚ ಪಾವತಿ ಹಾಗೂ ತಾಳೆಬೆಳೆ ಬೆಳೆಯುವ ರೈತರಿಗೆ ಬೋರ್ವೆಲ್, ಬಾವಿ ನಿರ್ಮಿಸಿಕೊಳ್ಳಲು, ವಿದ್ಯುತ್/ಡೀಸೆಲ್ ಪಂಪ್ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನ ಪಡೆಯಬಹುದಾಗಿದೆ. ಸೋಲಾರ್ ಪಂಪ್‌ಸೆಟ್‌ಗಳ ಖರೀದಿಗೆ ಇಲಾಖೆಯಿಂದ ಶೇ. 50 ರ ಸಹಾಯಧನ, 3ಊP ಪಂಪ್ ಸೆಟ್ ಗೆ ಒಟ್ಟು ವೆಚ್ಚ 2.00 ಲಕ್ಷಗಳಿದ್ದು ರೂ. 1.00 ಲಕ್ಷ ಸಹಾಯಧನ ಹಾಗೂ 5 ಊP ಮೇಲ್ಪಟ್ಟ ಪಂಪ್‌ಸೆಟ್ ಗೆ ಒಟ್ಟು ವೆಚ್ಚ 3.00 ಲಕ್ಷಗಳಿಗೆ ರೂ. 1.47 ಲಕ್ಷ ಸಹಾಯಧನ ಲಭ್ಯವಿದೆ.

ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಪೌಷ್ಠಿಕ ತೋಟಗಳ ನಿರ್ಮಾಣಕ್ಕೆ ಅವಕಾಶವಿರುತ್ತದೆ.

ಈ ಎಲ್ಲಾ ಯೋಜನೆಗಳ ಪ್ರಯೋಜನೆ ಪಡೆಯಲು ಆಸಕ್ತ ರೈತರು ಪ್ರಥಮ ಹಂತದಲ್ಲಿ ನೋಂದಣಿ ಅರ್ಜಿಯೊಂದಿಗೆ ಬೆಳೆ ನಮೂದಿಸಿರುವ ಇತ್ತೀಚಿನ ಪಹಣಿ ಪತ್ರ ಮತ್ತು ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಇಲಾಖಾ ಮಾರ್ಗಸೂಚಿಯನುಸಾರ ಅರ್ಜಿಗಳನ್ನು ಜೇಷ್ಠತೆಯ ಆಧಾರದಲ್ಲಿ ಇಲಾಖೆ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ಪಂಚಾಯತ್, ಉಡುಪಿ ಮೊ.ನಂ: 8095991105 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.