ಆಗುಂಬೆ ಘಾಟ್‌ ಸ್ವಚ್ಛತಾ ಅಭಿಯಾನದಲ್ಲಿ ಕ್ರಿಯೇಟಿವ್‌ ಹಾಗೂ ಶಿರ್ಡಿ ಸಾಯಿಬಾಬಾ ಕಾಲೇಜು ವಿದ್ಯಾರ್ಥಿಗಳು ಭಾಗಿ

ಕಾರ್ಕಳ: ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಮತ್ತು ಶಿರ್ಡಿ ಸಾಯಿಬಾಬಾ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ಆಗುಂಬೆಯ ಘಾಟಿಯ ಇಕ್ಕೆಲಗಳನ್ನು “ಸ್ವಚ್ಛತೆಯೆಡೆಗೆ ನಮ್ಮ ಹೆಜ್ಜೆ, ಪರಿಸರ ಕಾಳಜಿ ನಮ್ಮೆಲ್ಲರ ಹೊಣೆ” ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಮಾತನಾಡಿ, ಈ ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಅನನ್ಯ ಪ್ರಾಣಿ, ಪಕ್ಷಿ ಪ್ರಬೇಧಗಳಿವೆ. ನಾವು ತಿಂದು ಬಿಸಾಡುವ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಅವುಗಳ ಜೀವನ ಅಪಾಯದಲ್ಲಿದೆ. ಆದ್ದರಿಂದ ನಾವು ಪ್ರಕೃತಿಯನ್ನು ಹಾಳು ಮಾಡುವ ಕಾರ್ಯ ಬಿಟ್ಟು ಸಾಧ್ಯವಾದಷ್ಟು ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಎನ್‌ ಎಸ್ ಎಸ್‌ ನ ಯೋಜನಾಧಿಕಾರಿ ಉಮೇಶ್‌ ಮಾತನಾಡಿ, ನಾವು ಶಿಕ್ಷಿತರಾದರೂ ಅನಕ್ಷರಸ್ಥರಂತೆ ವರ್ತಿಸುತ್ತಿದ್ದೇವೆ. ನಾವು ಬಳಸಿದ ತ್ಯಾಜ್ಯ ವಸ್ತುಗಳನ್ನು, ಕಸ, ಪ್ಲಾಸ್ಟಿಕ್‌ ಇತ್ಯಾದಿಗಳನ್ನು ಜವಾಬ್ದಾರಿ ಇಲ್ಲದೆ ಕಂಡಲ್ಲಿ ಎಸೆಯುತ್ತಿದ್ದೇವೆ. ಅದು ಕಾಡಿನ ಪರಿಸರವನ್ನು ಮಲಿನಗೊಳಿಸಿ ಅಲ್ಲಿನ ಪ್ರಾಣಿಪಕ್ಷಿಗಳಿಗೂ ತೊಂದರೆಯುಂಟು ಮಾಡುತ್ತಿದೆ. ಆದ್ದರಿಂದ ಪ್ರವಾಸಿ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಸ್ವಂತ ಕಾಳಜಿಯಿಂದ ನಿರ್ಮಲವಾಗಿಡುವ ಕಡೆಗೆ ಗಮನ ಹರಿಸಬೇಕಾಗಿದೆ ಎಂದು ನೀಡಿದರು.

ಶಿರ್ಡಿ ಡಿಗ್ರಿ ಕಾಲೇಜಿನ ಆಶೀಶ್‌ ಶೆಟ್ಟಿ ಮಾತನಾಡಿ ಪ್ರತಿಯೊಬ್ಬರಿಗೂ ಸಾಮಾಜಿಕ ಪ್ರಜ್ಞೆಯಿರಬೇಕು. ಕೊಳಕು ಮಾಡುವ ಸಂಸ್ಕೃತಿ ನಿಲ್ಲಬೇಕು. ಎಲ್ಲರೂ ಬದುಕಿ ಬಾಳುವ ವಾತಾವರಣ ನಿರ್ಮಾಣ ಮಾಡುವುದಕ್ಕಾಗಿ ನಾವೆಲ್ಲ ಟೊಂಕಕಟ್ಟಿ ನಿಲ್ಲಬೇಕಾದ ಅನಿರ್ವಾಯತೆಯಿದೆ. ಪರಿಸರ ಪ್ರೀತಿ ಬೆಳೆಸೋಣ ಎಂದರು.

ಆಗುಂಬೆಯ ಘಾಟಿಯ ಆರಂಭದಿಂದ ಸೋಮೇಶ್ವರದವರೆಗೆ ಕ್ರಿಯೇಟಿವ್‌ ಕಾಲೇಜು ಹಾಗೂ ಶಿರ್ಡಿ ಸಾಯಿಬಾಬಾ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನೇರವೇರಿಸಿದರು. ಉಪನ್ಯಾಸಕರಾದ ಚಂದ್ರಕಾಂತ ಆಚಾರ್ಯ, ಶ್ರೀಮತಿ ಶ್ರೀನಿಧಿ, ಪ್ರಿಯಾಂಕ, ತಿಪ್ಪೇಸ್ವಾಮಿ, ಶಶಿಧರ ಭಟ್‌ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಹರೀಶ್‌, ಚ್ರೈತ್ರಾ, ಆರ್.ಎಫ್.ಒ ಗೌರವ್‌ ಹಾಗೂ ಅರಣ್ಯಾಧಿಕಾರಿಗಳು ಮತ್ತು ಶಿರ್ಡಿ ಸಾಯಿಬಾಬಾ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಉಪಸ್ಥಿತರಿದ್ದರು.