ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ವೇದಿಕೆ ಉದ್ಘಾಟನಾ ಕಾರ್ಯಕ್ರಮ

ಉಡುಪಿ: ಅಜ್ಜರಕಾಡು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ 2022-23ನೇ ಸಾಲಿನ ವಿದ್ಯಾರ್ಥಿ ವೇದಿಕೆ ಮತ್ತು ಪ್ರತಿಭಾ ದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳಲಾಯಿತು.

ಕಾಲೇಜಿನ ಮಹಾ ಪೋಷಕರಾದ ನಾಡೋಜ ಡಾ. ಜಿ.ಶಂಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಜಿಲ್ಲೆಯ ಪ್ರಮುಖ ಕಾಲೇಜಾಗಿರುವ ನಮ್ಮ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಮತ್ತು ಮದ್ಯಮ ವರ್ಗದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜು ಕೂಡ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿನಿಯರು ತಮ್ಮ ಓದು, ಕ್ರೀಡೆ ಮತ್ತು ಸಾಂಸ್ಕೃತಿಕ ಪ್ರತಿಭೆಗಳ ಕಡೆಗೆ ಗಮನ ಹರಿಸಬೇಕು. ಸಮಸ್ಯೆಗಳನ್ನು ಬಗೆಹರಿಸಲು ಕಾಲೇಜಿನ ಆಡಳಿತ ಮಂಡಳಿ ಇದ್ದು, ಸದಾ ವಿದ್ಯಾರ್ಥಿಗಳ ಪರವಾಗಿ ನಿಲ್ಲುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ ಶೆಟ್ಟಿ ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಪ್ರಾಧ್ಯಾಪಕರ ತಂಡವು ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇದು ಸಹಾಯಕವಾಗಿದೆ. ಇದು ಸರಕಾರಿ ಕಾಲೇಜಾಗಿದ್ದರೂ ವಾಣಿಜ್ಯ, ವಿಜ್ಞಾನ, ಗಣಕಯಂತ್ರ, ಮತ್ತು ಕಲಾವಿಭಾಗಗಳು ಕಾರ್ಯನಿರ್ವಹಿಸಲು ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಕಾಲೇಜಿನ ಆಡಳಿತ ಮಂಡಳಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ 2021-22ನೇ ಸಾಲಿನ ವಾರ್ಷಿಕ ಸಂಚಿಕೆ ‘ಕಲಶ’ ವನ್ನು ಬಿಡುಗಡೆ ಮಾಡಿದ, ಭರತ್ಯನಾಟ್ಯ ಕಲಾವಿದೆ, ಚಿತ್ರನಟಿ, ವಿದುಷಿ ಶ್ರೀಮತಿ ಮಾನಸಿ ಸುಧೀರ್ ಮಾತನಾಡುತ್ತಾ ಒಬ್ಬ ವ್ಯಕ್ತಿಯ ಸೌಂದರ್ಯ ಅಡಗಿರುವುದು ಆತನ ಆತ್ಮವಿಶ್ವಾಸದಲ್ಲಿ. ಕಾಲೇಜಿನ ಪ್ರತಿಭಾ ದಿನಾಚರಣೆ ಇಂತಹ ಆತ್ಮವಿಶ್ವಾಸಗಳಿಗೆ ವೇದಿಕೆಯಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವತಂತ್ರ ಮನಸ್ಸು, ಸೃಜನಶೀಲತೆ ಮತ್ತು ತೊಡಗಿಸಿಕೊಳ್ಳುವಂತಹ ಗುಣಗಳಿಂದ ಸಿಗುವ ಅವಕಾಶಗಳ ಸದ್ಬಳಕೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿ ಯಶ್‌ಪಾಲ್ ಸುವರ್ಣ ಮಾತನಾಡಿ, ಕಾಲೇಜಿನ ಹೆಸರಿಂದು ರಾಜ್ಯದ ಮೂಲೆ ಮೂಲೆಗಳಿಗೂ ತಲುಪಿದೆ. ಇದಕ್ಕೆ ಕಾರಣ ಕಾಲೇಜಿನ ವಿದ್ಯಾರ್ಥಿನಿಯರು. ವಿದ್ಯಾರ್ಥಿನಿಯರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಾಡಿರುವ ಸಾಧನೆಯಿಂದ ಇದು ಸಾಧ್ಯವಾಗಿದೆ. ಇನ್ನು ಮುಂದೆಯೂ ಇಂತಹ ಸಾಧನೆ ವಿದ್ಯಾರ್ಥಿನಿಯರ ಕಡೆಯಿಂದ ನಡೆಯಬೇಕು. ಇದಕ್ಕೆ ಬೇಕಾಗಿರುವ ಸೌಕರ್ಯಗಳನ್ನು ಪೂರೈಸುವಲ್ಲಿ ಆಡಳಿತ ಮಂಡಳಿವಿದ್ಯಾರ್ಥಿನಿಯರ ಜೊತೆಗಿರಲಿದೆ ಎಂದರು.

ಕಾಲೇಜಿನ ಸಹಪ್ರಾಧ್ಯಾಪಕ ಹುದ್ದೆಯಿಂದ ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ಹೊಂದಿದ ಪ್ರೊ. ಭಾಸ್ಕರ ಶೆಟ್ಟಿ ಎಸ್, ಪ್ರೊ. ಶ್ರೀಧರ್‌ ಪ್ರಸಾದ ಕೆ, ಪ್ರೊ. ನಿಕೇತನ ಮತ್ತು ಪ್ರೊ. ರವಿರಾಜ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಾಲೇಜಿನ ಕ್ರೀಡಾ ಪ್ರತಿಭೆ ಮತ್ತು ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ನಲ್ಲಿ 2 ಚಿನ್ನದ ಪದಕವನ್ನು ಗೆದ್ದ ಕು. ಪ್ರತೀಕ್ಷಾ ಇವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವಾಣಿ ಆರ್ ಬಲ್ಲಾಳ್, ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ., ವಾಣಿಜ್ಯ ನಿಕಾಯ ಡೀನ್ ಶ್ರೀಮತಿ ಗೌರಿ ಎಸ್ ಭಟ್, ವಿಜ್ಞಾನ ನಿಕಾಯ ಡೀನ್ ರಾಮಚಂದ್ರ ಅಡಿಗ ಜಿ, ಕಲಾ ನಿಕಾಯ ಡೀನ್ ಪ್ರೊ. ನಿಕೇತನ, ಸ್ನಾತಕೋತ್ತರ ವಿಭಾಗದ ಸಂಯೋಜಕ ಪ್ರೊ. ಶ್ರೀಧರ್‌ ಪ್ರಸಾದ ಕೆ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕು. ಅನುಷ ಎಂ.ಎಸ್ ನಿರೂಪಿಸಿದರು. ಪ್ರಾಂಶುಪಾಲ ಪ್ರೊ. ಭಾಸ್ಕರ ಶೆಟ್ಟಿ ಎಸ್., ಅತಿಥಿಗಳನ್ನು ಸ್ವಾಗತಿಸಿದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ಶ್ರೀಮತಿ ವಿದ್ಯಾ ಡಿ ವಂದಿಸಿದರು.