ಆರ್.ಎಸ್.ಎಸ್ ಸಮವಸ್ತ್ರ ಸುಡುವ ಅಭಿಯಾನ: ಸಿದ್ದರಾಮಯ್ಯ ಹೇಳಿಕೆ ಖಂಡಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್

ಉಡುಪಿ: ಜಗತ್ತಿನ ಅತೀ ದೊಡ್ಡ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮವಸ್ತ್ರ ಸುಡುವ ಅಭಿಯಾನ ಆರಂಭಿಸುವ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ರಾಜ್ಯ ಬಿಜೆಪಿ  ಉಪಾಧ್ಯಕ್ಷೆ ನಯನಾ ಗಣೇಶ್ ಖಂಡಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಳೆದ 97 ವರ್ಷಗಳಿಂದ ಸಾಮಾಜಿಕ ಸಂಘಟನೆಯಾಗಿ ಸಮಾಜದಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತ ಬಂದಿದೆ. ದೇಶದ ಸಂಕಷ್ಟ ಸಮಯದಲ್ಲಿ, ಪ್ರಾಕೃತಿಕ ಅವಘಡಗಳಾದಾಗ ಮತ್ತು ಕೊರೊನಾದಂತಹ ಪರಿಸ್ಥಿತಿಗಳಲ್ಲಿ ಜೀವದ ಹಂಗು ತೊರೆದು ಸಂಘದ ಸ್ವಯಂ ಸೇವಕರು ಸೇವೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ನ ಇಂತಹ ಅಭಿಯಾನ ಅವರ ಮನಸ್ಥಿತಿಯನ್ನು ತೋರಿಸಲಿದ್ದು, ಅಧಿಕಾರ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಹತಾಶರಾಗಿದ್ದು ವೋಟಿಗಾಗಿ ಒಂದು ವರ್ಗವನ್ನು ಓಲೈಕೆ ಮಾಡಲು ಇಂತಹ ಹೇಳಿಕೆ ನೀಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಲಿದ್ದಾರೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.