ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನಾ ಕಾರ್ಯಕ್ರಮ

ಉಡುಪಿ: ರಥಬೀದಿಯ ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೆಯು ನಡೆಯಿತು. ಭಾನುವಾರ ಮುಂಜಾನೆಯಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ವಿಷ್ಣುಸಹಸ್ರನಾಮ ಪಾರಾಯಣ ನಡೆದವು. ಸಂಸ್ಕೃತ ಮಹಾಪಾಠಶಾಲೆಯ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣ ಆಚಾರ್ಯ ಹಾಗೂ ವಿದ್ವಾಂಸಹೆರ್ಗ ರವೀಂದ್ರ ಭಟ್ ಗುರುಗಳ ಸಂಸ್ಮರಣೆ ಮಾಡಿದರು.

ಶ್ರೀ ಮಠದ ವಿದ್ವಾಂಸ ರಾಮಚಂದ್ರ ಭಟ್ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀಪಾದರ ಪಾದುಕೆಗೆ ಅರ್ಘ್ಯ ಪಾದ್ಯಾದಿಗಳನ್ನು ನೀಡಿ ಪುಷ್ಪಾರ್ಚನೆ ಮಾಡಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಠಕ್ಕೆ ಆಗಮಿಸಿ ನಮನವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ ಎಂ.ಬಿ. ಪುರಾಣಿಕ್, ಆನೆಗುಡ್ಡೆ ಸಿದ್ಧಿವಿನಾಯಕ ದೇವಸ್ಥಾನದ ಧರ್ಮಧರ್ಶಿ ರಮಣ ಉಪಾಧ್ಯಯ, ಉಡುಪಿಯ ರಾಘವೇಂದ್ರ ರಾವ್, ಯಕ್ಷಗಾನ ಕಲಾರಂಗದ ಎಸ್.ವಿ.ಭಟ್, ಶ್ರೀಮಠದ ಅಧಿಕಾರಿಗಳಾದ ಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಪೆರಂಪಳ್ಳಿ, ಇಂದುಶೇಖರ್ ಮೊದಲಾದವರು ಉಪಸ್ಥಿತರಿದ್ದರು.

ಆಗಮಿಸಿದ ಅಭಿಮಾನಿಗಳು,ಭಕ್ತಾದಿಗಳು ಪಾದುಕೆಗೆ ಪುಷ್ಪಾರ್ಚನೆ ಮಾಡಿ ನಮನವನ್ನು ಸಲ್ಲಿಸಿದರು.