ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಸೌಜನ್ಯ ಹೋರಾಟ ಸಮಿತಿಯಿಂದ ವಿಶೇಷ ಪೂಜೆ

ಉಡುಪಿ: ‘ಸೌಜನ್ಯಾಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ಅತ್ಯಾಚಾರ ನಡೆಸಿದವರಿಗೆ ಕಾನೂನಿನ ಮೂಲಕ ಶಿಕ್ಷೆಯಾಗಬೇಕು’ ಎಂದು ಪ್ರಾರ್ಥಿಸಿ ಇಲ್ಲಿನ ಅಮೃತೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಸೌಜನ್ಯಾ ಹೋರಾಟ ಸಮಿತಿ ವಿಶೇಷ ಪೂಜೆ ಸಲ್ಲಿಸಿತು.

ಸಮಿತಿಯ ಪ್ರಮುಖ ಕೋಟ ದಿನೇಶ ಗಾಣಿಗ ಮಾತನಾಡಿ, ಈವರೆಗೆ ಸೌಜನ್ಯಾಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಾಕಷ್ಟು ಹೋರಾಟಗಳು ನಡೆಸಿದ್ದೇವೆ. ಆದರೆ ಮುಂದೆ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಸೌಜನ್ಯಾಳ ಅತ್ಯಾಚಾರ ಎಸಗಿದ ಆರೋಪಿಗಳು, ಅವರ ಪರವಾಗಿ ನಿಂತವರು ಸರ್ವನಾಶವಾಗಬೇಕು ಎಂದು ರಾಜ್ಯದ 25 ಸಾವಿರ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿದ್ದೇವೆ’ ಎಂದರು.

ಹೋರಾಟ ಸಮಿತಿಯ ಸಚಿನ್ ಶ್ರೀಯಾನ್ ಪಾಂಡೇಶ್ವರ, ಭರತ ಗಾಣಿಗ, ವಿಜಯ ಪೂಜಾರಿ, ಸಂದೀಪ ಕದ್ರಿಕಟ್ಟು, ಶ್ರೀನಿವಾಸ ಪುತ್ರನ್, ಯೋಗೇಂದ್ರ ಪುತ್ರನ್, ಕೋಟ ಕೇಶವ ಆಚಾರ್ ಪಾಲ್ಗೊಂಡಿದ್ದರು.