ಸೌತ್‌ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ ಮಹಾಸಭೆ

ಉಡುಪಿ: ವ್ಯಕ್ತಿಯ ವ್ಯಕ್ತಿತ್ವ, ಸಮಾಜವನ್ನು ಕೇವಲ ಒಂದು ಚಿತ್ರದ ಮೂಲಕ ಬಿಂಬಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಛಾಯಾಚಿತ್ರ ಗ್ರಾಹಕರು ಸಮಾಜದ ದೃಷ್ಠಿಕೋನವನ್ನು ಅರ್ಥೈಸಿಕೊಂಡು ಧನಾತ್ಮಕ ಚಿತ್ರ ತೆಗೆಯಲು ಪ್ರಯತ್ನಿಸಬೇಕು ಎಂದು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ. ವಿಜಯ ಬಲ್ಲಾಳ್‌ ಹೇಳಿದರು.

ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿ ಯೇಶನ್‌ ಸಹಯೋಗದಲ್ಲಿ ಭಾನುವಾರ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಿದ್ದ 31ನೇ ವಾರ್ಷಿಕ ಮಹಾಸಭೆಯನ್ನು ಉದ್ಭಾಟಿಸಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕ ಕೆ. ರಘುಪತಿ ಭಟ್‌ ಸಹಾಯಧನ ವಿತರಿಸಿದರು.
ಈ ಸಂದರ್ಭದಲ್ಲಿ 14 ವಲಯಗಳ ಪದಗ್ರಹಣ ನೆರವೇರಿಸಲಾಯಿತು. ನಿವೃತ್ತ ಯೋಧ ಕೃಷ್ಣ ಶೆಟ್ಟಿಬೆಟ್ಟು ಅವರಿಗೆ ಗೌರವ ಸಲ್ಲಿಸಲಾಯಿತು. ಛಾಯಾಚಿತ್ರ ಪರಿಕರಗಳ ಮಳಿಗೆ ಹಾಗೂ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಹಿರಿಯ ಫೋಟೋಗ್ರಾಫರ್ಸ್‌ ಗಳನ್ನು ಸನ್ಮಾನಿಸಲಾಯಿತು.

ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ, ಕರ್ನಾಟಕ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಪರಮೇಶ್‌ ಸುಬ್ಬಯ್ಯ, ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ವಿವಿಧೋದ್ದೇಶ ಸಹಕಾರ
ಸಂಘದ ಅಧ್ಯಕ್ಷ ಕೆ. ವಾಸುದೇವ ರಾವ್‌, ಸೌತ್‌ ಕೆನಠಾ ಫೋಟೋಗ್ರಾಫರ್‌ ಅಸೋಸಿಯೇಶನ್ ಉಪಾಧ್ಯಕ್ಷ ನಾಗರಾಜ ರಾಯಪ್ಪನ ಮಠ, ಪ್ರ. ಕಾರ್ಯದರ್ಶಿ ಹರೀಶ್‌ ಅಡ್ಯಾರ್‌, ಕೋಶಾಧಿಕಾರಿ ಆನಂದ ಎನ್‌., ಸಲಹಾ ಸಮಿತಿ ಸದಸ್ಯರು, ಸಂಘದ ಮಾಜಿ ಅಧ್ಯಕ್ಷರು, 14 ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಶ್ರೀಧರ್‌ ಶೆಟ್ಟಿಗಾರ್‌ ಸ್ವಾಗತಿಸಿದರು. ರಾಘವೇಂದ್ರ, ಬಬಿತಾ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಗಿರಿ ವಂದಿಸಿದರು.