ರಾಮಮಂದಿರ ಭೂಗರ್ಭಕ್ಕೆ ಕೃಷ್ಣ ನಗರಿಯ ಮಣ್ಣು: ಪ್ರಧಾನಿ ಮೋದಿ ಅವರಿಂದ ಅಯೋಧ್ಯೆ ಭೂಮಿಗೆ ಅರ್ಪಣೆ

ಉಡುಪಿ: ಜಗತ್ತಿನ ಕೋಟ್ಯಂತರ ಹಿಂದುಗಳ ಶತಕಗಳ ಕನಸು ಸಾಕಾರಗೊಂಡು ಅಯೋಧ್ಯೆಯಲ್ಲಿ ಸದ್ಯದಲ್ಲೇ ನಿರ್ಮಾಣಗೊಳ್ಳಲಿರುವ ಭವ್ಯ ಶ್ರೀ ರಾಮ ಮಂದಿರದ ಭೂಗರ್ಭ ಸೇರಲು ಹೊರಟಿದೆ ಶ್ರೀಕೃಷ್ಣ ನಗರಿ ರಜತಪೀಠಪುರದ ಪವಿತ್ರ ಮೃತ್ತಿಕೆ!
ಅಯೋಧ್ಯೆಯ ಸಂಕಲ್ಪಿತ ಮಂದಿರದ ತಳಭಾಗಕ್ಕೆ ದೇಶದ ನೂರಾರು ನದಿಗಳು , ಅನೇಕ ಪುಣ್ಯ ಕ್ಷೇತ್ರಗಳ ಪವಿತ್ರ ಮೃತ್ತಿಕೆಯನ್ನು  ಸೇರಿಸಲು ವಿಶ್ವಹಿಂದುಪರಿಷತ್ ನಿರ್ಧರಿಸಿದೆ.
ಅದರಂತೆ ಕೃಷ್ಣ ನಗರಿ ಉಡುಪಿಯ ಪವಿತ್ರ ಮಣ್ಣಿಗೆ ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶ್ರೀ ಕೃಷ್ಣನ ಗಂಧ ಪ್ರಸಾದ , ನಿರ್ಮಾಲ್ಯವಿಟ್ಟು ಮಂಗಳಾರತಿ ಬೆಳಗಿ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಅತ್ಯಂತ ಯಶಸ್ವಿಯಾಗಿ ನಡೆದು ಲೋಕಕಲ್ಯಾಣವಾಗಲಿ ಎಂದು ಪ್ರಾರ್ಥಿಸಿ ವಿಹಿಂಪದ ಉಡುಪಿಯ ಪ್ರಮುಖರಿಗೆ ಸೋಮವಾರ ಹಸ್ತಾಂತರಿಸಿದರು.
ವಿಹಿಂಪ‌ ಜಿಲ್ಲಾಧ್ಯಕ್ಷ  ಪಿ. ವಿಷ್ಣುಮೂರ್ತಿ ಆಚಾರ್ಯ, ಕಾರ್ಯದರ್ಶಿ ದಿನೇಶ್ ಮೆಂಡನ್ ಬಜರಂಗದಳ ಪ್ರಾಂತ ಸಹಸಂಚಾಲಕ ಸುನಿಲ್ ಕೆ ಆರ್, ಮಠದ ವ್ಯವಸ್ಥಾಪಕ ಗೋವಿಂದರಾಜ್, ವಿದ್ವಾನ್ ರಾಮನಾಥ ಆಚಾರ್ಯ, ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು .
ಸ್ವಾಮೀಜಿಯವರಿಂದ ಮೃತ್ತಿಕೆಯನ್ನು ಸ್ವೀಕರಿಸಿದ ಬಳಿಕ ಕಾರ್ಯಕರ್ತರು ರಥಬೀದಿಯಲ್ಲಿ ರಾಮನಾಮ ಸ್ಮರಣೆಯೊಂದಿಗೆ ಪ್ರದಕ್ಷಿಣೆ ಬಂದು ಶ್ರೀ ಮದನಂತೇಶ್ವರ ದೇವಳಕ್ಕೆ ತೆರಳಿ ಅಲ್ಲಿ ಶ್ರೀ ದೇವರ ಪ್ರಸಾದವನ್ನೂ ಸೇರಿಸಿ, ಅರ್ಚಕರ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹಿತ್ತಾಳೆಯ ಕರಂಡಕದಲ್ಲಿ ಮೃತ್ತಿಕೆಯನ್ನು ತುಂಬಿಸಿ ಕಳಿಸಿಕೊಟ್ಟರು
ಮೋದಿಯವರಿಂದ ಅಯೋಧ್ಯೆಯ ಭೂಮಿ ಸೇರಲಿದೆ:
ಉಡುಪಿ ಮಾತ್ರವಲ್ಲದೆ ದಕ್ಷಿಣ ಭಾರತದ ಅನೇಕ ಕ್ಷೇತ್ರಗಳ ಹಾಗೂ ನದಿಗಳ ಮೃತ್ತಿಕೆಯನ್ನು ಸಂಗ್ರಹಿಸಲಾಗುತ್ತಿದೆ . ಇವೆಲ್ಲವನ್ನೂ ಆಗಸ್ಟ್ 5 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಸಂದರ್ಭದಲ್ಲಿ ಮಂದಿರದ ಜಾಗದಲ್ಲಿ ಭೂಮಿಗೆ ಅರ್ಪಿಸಲಿದ್ದಾರೆ.
ಶಿಲಾನ್ಯಾಸ ಸಮಾರಂಭಕ್ಕೆ ಪೇಜಾವರ ಶ್ರೀ ಗೈರು:
ಚಾತುರ್ಮಾಸ್ಯ ವ್ರತದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಆ. 5ರಂದು ನಡೆಯಲಿರುವ ಶಿಲಾನ್ಯಾಸ ಸಮಾರಂಭದಲ್ಲಿ ಪೇಜಾವರ ಶ್ರೀಗಳು ಭಾಗವಹಿಸುತ್ತಿಲ್ಲ ಎಂದು ಮಠದ ಪ್ರಕಟಣೆ ತಿಳಿಸಿದೆ.