ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿ ಮತ್ತು ಶ್ರೀ ಶಾರದಾ ಕಾಲೇಜು ನಡುವೆ ಕೌಶಲ್ಯಾಭಿವೃದ್ಧಿ ತರಬೇತಿ ಒಪ್ಪಂದ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ತರಬೇತಿ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು, ಬಸ್ರೂರಿನ ಶ್ರೀ ಶಾರದಾ ಕಾಲೇಜು ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್, ಫೈನಾನ್ಶಿಯಲ್ ಮತ್ತು ಇನ್ಶುರೆನ್ಸ್ ಕ್ಷೇತ್ರದಲ್ಲಿ ಬಹುಬೇಡಿಕೆಯ ಬ್ಯುಸಿನೆಸ್ ಕರೆಸ್ಪಾಂಡೆನ್ಸ್ ಆಂಡ್ ಬ್ಯುಸಿನೆಸ್ ಫೆಸಿಲಿಟೆಟರ್ ತರಬೇತಿಗಳನ್ನು ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ಸಂಪೂರ್ಣ ಉಚಿತವಾಗಿ ನೀಡಲು ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದಂತೆ ಉನ್ನತಿ ಸಂಸ್ಥೆಯು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿರುವ ಶ್ರೀ ಶಾರದಾ ಕಾಲೇಜಿನ ಬಿ.ಕಾಂ ಮತ್ತು ಬಿಎ ವಿದ್ಯಾರ್ಥಿಗಳಿಗೆ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಬ್ಯಾಂಕಿಂಗ್, ಫೈನಾನ್ಶಿಯಲ್, ಇನ್ಶುರೆನ್ಸ್ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳಿರುವ ತರಬೇತಿಗಳನ್ನು ಉಚಿತವಾಗಿ ನೀಡಿ ನಂತರ ಉದ್ಯೋಗಾವಕಾಶವನ್ನೂ ಒದಗಿಸಲು ಒಪ್ಪಿಕೊಂಡಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಉನ್ನತಿಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ,”ಪ್ರಪಂಚದ ಯುವಾ ದೇಶವಾಗಿರುವ ಭಾರತದಲ್ಲಿ ವಿದ್ಯಾರ್ಥಿಗಳನ್ನು ಕೌಶಲ್ಯ ಭರಿತರನ್ನಾಗಿಸಿ ಉದ್ಯೋಗಾವಕಾಶ ಸೃಷ್ಟಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಧ್ಯೇಯ. ವಿಶೇಷವಾಗಿ ಗ್ರಾಮೀಣ ಹಾಗೂ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೂ ಸರಿಯಾದ ತರಬೇತಿ ನೀಡಿದರೆ ಉತ್ತಮ ಭವಿಷ್ಯ ನಿರ್ಮಿಸಬಹುದು. ಒಂದು ವಿದ್ಯಾರ್ಥಿ ಉತ್ತಮ ಉದ್ಯೋಗ ಪಡೆದರೆ, ಒಂದು ಕುಟುಂಬಕ್ಕೆ ಆಧಾರವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಕಾಲೇಜುಗಳೊಂದಿಗೆ ಇಂತಹ ಒಪ್ಪಂದದ ಮೂಲಕ ಸಹಕರಿಸಲು ಬದ್ಧವಾಗಿದೆ” ಎಂದರು.

ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲೆ ಡಾ.ಚಂದ್ರಾವತಿ ಶೆಟ್ಟಿ ಮಾತನಾಡಿ, “ನಮ್ಮ ಕಾಲೇಜಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಉನ್ನತಿ ಸಂಸ್ಥೆಯು ಉತ್ತಮ ಭವಿಷ್ಯದ ತರಬೇತಿಗಳನ್ನು ಉಚಿತವಾಗಿ ನೀಡಲು ಮುಂದೆ ಬಂದಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ. ನಮ್ಮ ಸಂಸ್ಥೆ ಅವರಿಗೆ ಆಭಾರಿಯಾಗಿದೆ” ಎಂದರು.

ತರಬೇತಿಯ ವಿವರಗಳನ್ನು ತರಬೇತುದಾರ ನವೀನ್ ನಾಯಕ್ ವಿದ್ಯಾರ್ಥಿಗಳಿಗೆ ವಿವರಿಸಿದರು. ಪ್ಲೇಸ್ಮೆಂಟ್ ಕೋರ್ಡಿನೇಟರ್ ವಿಶ್ವನಾಥ್ ಆಚಾರ್ಯ, ಕಾಮರ್ಸ್ ವಿಭಾಗದ ಮುಖ್ಯಸ್ಥ ಪುರುಷೋತ್ತಮ, ಉನ್ನತಿ ಸಂಸ್ಥೆಯ ರಾಜೇಶ್ ಕುಮಾರ್, ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.