ಕುಂದಾಪುರ: ಕಮಲಶಿಲೆ ಗ್ರಾಮದ ಬರೆಗುಂಡಿ ನಿವಾಸಿ, ಸಿದ್ದಾಪುರ ಚಾತ್ರ ಎಂಟರ್ಪ್ರೈಸಸ್ ಮಾಲಕ ಉದಯ ಚಾತ್ರ (43) ಅವರು ಸೆ.17ರಂದು ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡ ಘಟನೆ ನಡೆದಿದೆ.
ಉದಯ ಚಾತ್ರ ಅವರು ಮೃದು ಭಾಷಿಗರಾಗಿದ್ದು, ಎಲ್ಲಾರೊಂದಿಗೆ ಚೆನ್ನಾಗಿ ಬೇರೆಯುತ್ತಿದ್ದರು. ತನ್ನ ನಿವಾಸವಾಗಿದ್ದ ಬರೆಗುಂಡಿಯಿಂದ ಸೆ. 17ರಂದು ತನ್ನ ತಂದೆ, ತಾಯಿ ಹಾಗೂ ಪತ್ನಿಯ ಜತೆಯಲ್ಲಿ ಕಮಲಶಿಲೆಯಲ್ಲಿ ನಡೆಯುತ್ತಿದ್ದ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗೆ ಬಂದಿದ್ದರು.
ತಂದೆ, ತಾಯಿ ಹಾಗೂ ಪತ್ನಿಯನ್ನು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಬಿಟ್ಟು, ಸಿದ್ದಾಪುರದಲ್ಲಿರುವ ತನ್ನ ಮಾಲಿಕ ತ್ವದ ಚಾತ್ರ ಎಂಟರ್ಪ್ರೈಸಸ್ ತೆರಳುವುದ್ದಾಗಿ ಹೇಳಿ ಹೊರಟಿದ್ದರು. ಅವರು ಕಮಲಶಿಲೆಯಿಂದ ತನ್ನ ಅಂಗಡಿಗೆ ತೆರಳದೇ, ನೇರವಾಗಿ ಮನೆ ತೆರಳಿದ್ದರು. ಮನೆಗೆ ಬಂದ ಅವರು ಮನೆಯ ಮಹಡಿ ಮೇಲಿನ ಕೋಣೆಗೆ ತೆರಳಿ, ಫ್ಯಾನಿನ ಕಬ್ಬಿಣದ ಕೊಕ್ಕೆಗೆ ನೈಲಾನ್ ಹಗ್ಗದಿಂದ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಂದೆ, ತಾಯಿ ಹಾಗೂ ಪತ್ನಿ ಅವರು ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ಮಹಾಸಭೆಯನ್ನು ಮುಗಿಸಿಕೊಂಡು ಮನೆಗೆ ಮರಳಿದಾಗ, ಮನೆಯಲ್ಲಿ ಉದಯ ಚಾತ್ರರ ವಾಹನ ಇರುವುದು ಗಮನಕ್ಕೆ ಬಂದಿದೆ. ಮನೆಗೆ ಬೀಗ ಕೂಡ ಹಾಕಿದ ಸ್ಥಿತಿಯಲ್ಲಿಯೇ ಇತ್ತು. ಮನೆಯವರು ಮನೆ ಸುತ್ತಮುತ್ತ ಹಾಗೂ ಒಳಗೆ ಹುಡುಕಾಡಿದ್ದರು. ಮೊದಲನೆ ಮಹಡಿಯ ಕೋಣೆಗೆ ಹೋಗಿ ನೋಡುವಾಗ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಿದ್ದಾಪುರದಲ್ಲಿರುವ ಚಾತ್ರ ಎಂಟರ್ಪ್ರೈಸಸ್ನಲ್ಲಿ ವ್ಯವಹಾರ ಚೆನ್ನಾಗಿ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಮನೆಯಲ್ಲಿ ಸಾಕಷ್ಟು ಕೃಷಿ ಕೂಡ ಇದೆ. ಆರ್ಥಿಕವಾಗಿ ಕೂಡ ಸಬಲರಾಗಿದ್ದರು. ಆದರೆ ಸಾವಿಗೆ ಮಾತ್ರ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಮೃತರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಪತ್ನಿ ನೀಡಿದ ದೂರಿನಂತೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















