ಜೈಲಿನಲ್ಲಿರುವ ಜಿ.ಪಂ ಸದಸ್ಯನನ್ನು ನೆನೆದ ಸಂಸದೆ!: ಆಕ್ರೋಶ: ಆಡಿಯೋ ವೈರಲ್

ಕುಂದಾಪುರ: ಭಾನುವಾರ  ಕೋಟದಲ್ಲಿ  ನಡೆದ ಉದ್ಯೋಗಮೇಳ  ಕಾರ್ಯಕ್ರಮದಲ್ಲಿ ಮಾರ್ಗಸೂಚಿ ಪ್ರಕಾರ ಭರವಸೆ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಸ್ಥಳೀಯ ಜಿ.ಪಂ, ತಾ.ಪಂ ಸದಸ್ಯರನ್ನು ಆಹ್ವಾನಿಸಲಾಗಿದ್ದು, ಆಮಂತ್ರಣ ಪತ್ರಿಕೆಯಲ್ಲೂ ಹೆಸರುಗಳನ್ನು ಮುದ್ರಿಸಲಾಗಿತ್ತು. ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಉದ್ಘಾಟನಾ ಭಾಷಣದ ಆರಂಭದಲ್ಲಿ ವೇದಿಕೆಯಲ್ಲಿರುವ ಜನಪ್ರತಿನಿಧಿಗಳ ಹೆಸರು ಹೇಳುತ್ತಾ ಕೋಟ ಅವಳಿ ಕೊಲೆ ಪ್ರಕರಣ ಆರೋಪದಲ್ಲಿ ಜೈಲು ಪಾಲಾಗಿರುವ ಕೋಟ ಜಿ.ಪಂ ಸದಸ್ಯ ರಾಘವೇಂದ್ರ ಬಾರಿಕೆರೆ ಹೆಸರನ್ನು ಪ್ರಸ್ತಾಪಿಸಿದರು. ಇದೀಗ ಸಂಸದೆ ಶೋಭಾ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕೊಲೆ ಆರೋಪದಲ್ಲಿ ಜೈಲು ಪಾಲಾಗಿರುವ ಜಿ.ಪಂ ಸದಸ್ಯನ ಹೆಸರು ಪ್ರಸ್ತಾಪಿಸುವ ಅಗತ್ಯ ಏನಿತ್ತು. ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿದ ಪ್ರಕರಣವನ್ನು ಸಂಸದೆ ಅಷ್ಟು ಬೇಗ ಮರೆತರೆ ಎಂದು ನೆಟ್ಟಿಗರು ಶೋಭಾ ಕರಂದ್ಲಾಜೆ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.