ಮಳಲಿ ಮಸೀದಿಯ ಜಾಗದಲ್ಲಿ ಶಿವನ ಸಾನಿಧ್ಯ! ತಾಂಬೂಲ ಪ್ರಶ್ನೆಯಲ್ಲಿ ಗೋಚರವಾಯಿತು ಸತ್ಯ?

ಮಂಗಳೂರು: ಮಳಲಿಯ ಜುಮಾ ಮಸೀದಿಯ ಜಾಗದಲ್ಲಿ ದೈವ ಸಾನಿಧ್ಯ ಇರುವುದು ಸ್ಪಷ್ಟವಾಗಿದೆ. ತಾಂಬೂಲ ಪ್ರಶ್ನೆಯಲ್ಲಿ ಗುರುಮಠ ಶಿವನ ಸಾನಿಧ್ಯವಿರೋದು ಗೋಚರವಾಗಿದೆ ಎಂದು ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ.

ಮಂಗಳೂರಿನ ಮಳಲಿ ಮಸೀದಿ ವಿವಾದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದು, ಮಸೀದಿ ಸ್ಥಳದಲ್ಲಿ ದೈವಸ್ಥಾನ ಇತ್ತೋ ಇಲ್ಲವೋ ಎಂಬುದರ ಬಗ್ಗೆ ಪಶ್ನೆ ಇಡಲಾಗಿದೆ. “ಪೂರ್ವಜರು ದೈವಾರಾಧನೆ ಮಾಡುತ್ತಿದ್ದ ಸ್ಥಳ ಇದಾಗಿದ್ದು, ಯಾವುದೋ ಕಾರಣಕ್ಕೆ ಇಲ್ಲಿಂದ ಅವರು ಹೋಗಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಅಷ್ಟಮಂಗಲ ಪ್ರಶ್ನಾ ಚಿಂತನೆ ಮೂಲಕ ಪಡೆಯಲಾಗುತ್ತದೆ” ಎಂದು ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಮಾಹಿತಿಯಲ್ಲಿ ಅವರು ಹೇಳಿಕೊಂಡಿದ್ದಾರೆ.

“ಹಿಂದಿನ‌ ಕಾಲದ ವ್ಯಾಜ್ಯವೊಂದರ ಪರಿಣಾಮ ಇಲ್ಲಿ ಹಿಂದೆ ಇದ್ದ ದೈವ ಸಾನಿಧ್ಯವು ನಾಶವಾಗಿದೆ. ಹಾಗಾಗಿ ಹಿಂದೆ ಇದ್ದವರು ಅಲ್ಲಿಂದ ಸ್ಥಳಾಂತರಗೊಂಡಿದ್ದಾರೆ. ಆದರೆ ದೈವ ಸಾನಿಧ್ಯವು ಅಲ್ಲಿಂದ ಪೂರ್ತಿಯಾಗಿ ಹೋಗಿಲ್ಲ. ಆದರೆ ಯಾವ ಸ್ಥಳದಲ್ಲಿ ದೈವ ಸಾನಿಧ್ಯವಿದೆ ಎಂದು ಶೋಧಿಸಬೇಕು. ಆ ಸಾನಿಧ್ಯದಲ್ಲಿ ಜೀವ ಕಳೆಯಿದೆ”.

“ಶೈವ – ವೈಷ್ಣವ ವಿವಾದದಲ್ಲಿ ಇಲ್ಲಿ ಹಿಂದಿನ ದೈವ ಸಾನಿಧ್ಯ ನಾಶವಾಗಿದೆ‌. ಈ ಸಂದರ್ಭ ಮರಣವೊಂದು ಘಟಿಸಿದೆ. ಆ ಬಳಿಕ ಹಿಂದೆ ಅಲ್ಲಿದ್ದವರು ಈ ದೈವ ಸಾನಿಧ್ಯವನ್ನು ಬೇರೆಲ್ಲಿಯೋ ಆರಾಧನೆ ಮಾಡುತ್ತಿದ್ದಾರೆ‌. ಅದರ ಫಲವಾಗಿ ಈಗಲೂ ಈ ಮಸೀದಿಯ ಸ್ಥಳದಲ್ಲಿರುವ ದೈವಸಾನಿಧ್ಯಕ್ಕೆ ಚೈತನ್ಯ ಶಕ್ತಿ ಇದೆ. ಆದ್ದರಿಂದ ಈಗ ಅದು ಗೋಚರವಾಗಿದೆ. ಆದರೆ ಎಲ್ಲರೂ ಒಗ್ಗಟ್ಟಾಗಿ ಸಮ್ಮತದಿಂದ ಈ ವಿವಾದವನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಊರಿಗೆ ಗಂಡಾಂತರವಿದೆ. ಈ ದೈವ ಸಾನಿಧ್ಯ ಅಭಿವೃದ್ಧಿ ಆದಲ್ಲಿ ಈಗ ಅಲ್ಲಿ ಇದ್ದವರಿಗೂ ಉತ್ತಮವೇ. ಆದ್ದರಿಂದ ಎಲ್ಲರೂ ಒಟ್ಟಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ” ಎಂದಿದ್ದಾರೆ.

ಸುದ್ದಿ ತಿಳಿದ ಬಳಿಕ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ ಮುಖಂಡ ಶರಣ್‌ ಪಂಪ್‌ವೆಲ್‌, “ನಮ್ಮ ಪೂರ್ವಜರು ಇಲ್ಲಿ ದೇವರ ಆರಾಧನೆ ಮಾಡುತ್ತಿದ್ದ ಬಗ್ಗೆ ಸ್ಪಷ್ಟನೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಮಳಲಿ ಮಸೀದಿಯ ಆಡಳಿತ ಮಂಡಳಿಗೆ, ಅಲ್ಲಿರುವ ಜಾಗ ಬಿಟ್ಟುಕೊಡುವಂತೆ ಮನವಿ ಮಾಡುತ್ತೇವೆ. ಈ ಸಂಬಂಧ ನಾವು ಹೋರಾಟ ಮುಂದುವರೆಸಲಿದ್ದೇವೆ”.

ಮಂಗಳೂರು ನಗರದ ಹೊರವಲಯದ ಮಳಲಿ ಮಸೀದಿಯಲ್ಲಿ ದೇವಸ್ಥಾನ ಶೈಲಿಯ ಕಟ್ಟಡ ಪತ್ತೆಯಾಗಿದ್ದು, ಈ ವಿಚಾರದಲ್ಲಿ ಇಂದು ಕೇರಳದ ಪ್ರಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರು ತಾಂಬೂಲ ಪ್ರಶ್ನೆಯನ್ನಿಟ್ಟು, ಇಲ್ಲಿ ಗುರುಸಾನಿಧ್ಯ ಇತ್ತೋ ಇಲ್ಲವೋ ಎಂಬುರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಸೀದಿ ಜಾಗದಲ್ಲಿ ದೈವ ಸಾನಿಧ್ಯ ಇರೋದು ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ಸುದ್ದಿ ಮೂಲ: ಝೀ ಕನ್ನಡ ನ್ಯೂಸ್