ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಮನೆ ಮೇಲೆ ಇಡಿ ದಾಳಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರ ಮನೆ ಸೇರಿದಂತೆ ಇತರ ಕಡೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇಂದು ನಸುಕಿನ ಜಾವ 3:30 ರ ಸುಮಾರಿಗೆ ಇಡಿ ಅಧಿಕಾರಿಗಳು ತಮ್ಮ ದಾಳಿಯನ್ನು ಪ್ರಾರಂಭಿಸಿದ್ದಾರೆ. ಡಿಸಿಸಿ ಬ್ಯಾಂಕ್​​ನಲ್ಲಿ ಅಡಮಾನ ಚಿನ್ನದ ಮೇಲಿನ ಸಾಲದಲ್ಲಿ ನಕಲಿ ಬಂಗಾರವನ್ನಿಟ್ಟುಕೊಂಡು ಸಾಲ ನೀಡಿದ ಬಹುಕೋಟಿ ಹಗರಣದಲ್ಲಿ ಮಂಜುನಾನಾಥ್ ಗೌಡ ಅವರ ಮೇಲೆ ಪ್ರಕರಣ ದಾಖಲಾಗಿತ್ತು.

ಈ ವಿಚಾರದಲ್ಲಿ ಇಡಿ ಇಲಾಖೆಗೆ ದೂರು ಹೋದ ಪರಿಣಾಮ ಇಡಿ ತನಿಖೆಯನ್ನು ಪ್ರಾರಂಭಿಸಿತ್ತು. ಇಡಿ ಅಧಿಕಾರಿಗಳು ಇಂದು ಮೂರನೇ ಬಾರಿ ದಾಳಿ ನಡೆಸಿದ್ದಾರೆ. ಆರ್.ಎಂ.ಮಂಜುನಾಥ ಗೌಡ ಅವರ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಕಟ್ಟೆ ಬಳಿಯ ಕರಕುಚ್ಚಿಯ ಮನೆ, ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯ ಮನೆ, ಶಿವಮೊಗ್ಗದ ಶರಾವತಿ ನಗರದ ಸಂಬಂಧಿಕರ ಮನೆ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್​.ಎಂ.ಮಂಜುನಾಥ ಗೌಡ ಮನೆ ಮತ್ತು ಅವರಿಗೆ ಸಂಬಂಧಿಸಿದ 10 ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ದೆಹಲಿ ಹಾಗೂ ಗೋವಾದ ಅಧಿಕಾರಿಗಳಿಂದ ದಾಳಿ: ದೆಹಲಿ ಹಾಗೂ ಗೋವಾದ ಇಡಿ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ. ದಾಳಿಯಲ್ಲಿ ಸುಮಾರು 60 ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದಾಳಿಯ ವೇಳೆ ಕೇಂದ್ರ ಶಸ್ತ್ರಾಸ್ತ್ರ ಪಡೆ ಆರ್​ಪಿಎಫ್ ಬಳಸಿಕೊಳ್ಳಲಾಗಿದೆ. ದಾಳಿಯ ಕುರಿತು ಇತರ ಮಾಹಿತಿ ಲಭ್ಯವಾಗಬೇಕಿದೆ.