ಕಡಿಯಾಳಿ: ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶಮೀ ವೃಕ್ಷ ಪೂಜೆ

ಶರನ್ನವರಾತ್ರಿ ಕಳೆದು ಮರುದಿನ ವಿಜಯದಶಮೀ ಪರ್ವದಿನದ ಮುಸ್ಸಂಜೆಯಲ್ಲಿ ಊರಿನ ಈಶಾನ್ಯ ಭಾಗದಲ್ಲಿರುವ ( ಅಥವಾ ನದೀ ತೀರ) ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಅದರ ಎಲೆಯನ್ನು ಪ್ರಸಾದವಾಗಿ ಸ್ವೀಕರಿಸಿದರೆ ಅಕ್ಷಯ ಸಂಪತ್ತು ಮತ್ತು ವಿಜಯ, ಯಶಸ್ಸು ಪ್ರಾಪ್ತಿ ಎನ್ನುತ್ತವೆ ಶಾಸ್ತ್ರ ಪುರಾಣಗಳು. ಮಹಾಭಾರತದಲ್ಲಿ ಪಾಂಡವರ ವಿಜಯಕ್ಕೂ, ರಾಮಾಯಣದಲ್ಲಿ ಶ್ರೀರಾಮನ‌ ವಿಜಯಕ್ಕೂ ಇದೇ ಕಾರಣ ಎನ್ನುತ್ತಾರೆ. ಈ ಹಿಂದೆ ಊರಿನಲ್ಲಿ ನೆಲ್ಲಿ , ಅರಳಿ , ಅಶ್ವತ್ಥ , ಶಮೀ, ಔದುಂಬರ ಮೊದಲಾದ ವೃಕ್ಷಗಳನ್ನು ಬೆಳೆಸಿ ರಕ್ಷಿಸುವ ಪದ್ಧತಿ ಇತ್ತು ಎಂಬುದನ್ನು ಗಮನಿಸಬೇಕು. ನಗರೀಕರಣ ಹೆಚ್ಚಾದಂತೆಲ್ಲ ಈ ಸಂಪ್ರದಾಯಗಳು ಬಿಟ್ಟು ಹೋಗಿವೆ. ಶಮೀ ವೃಕ್ಷ ಲಭ್ಯ ಇರುವವರು ಇವತ್ತು ಅದರ ಆರಾಧನೆ ಮಾಡಿದರೆ ಶ್ರೇಯಸ್ಸು ಲಭಿಸುವುದು.‌

ವಿಜಯದಶಮೀ ಪರ್ವದಿನದಂದು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶಮೀ ಪೂಜೆ ನಡೆಸಿ ಬಳಿಕ ( ಶ್ರೀಮದನಂತೇಶ್ವರ , ಚಂದ್ರಮೌಳೀಶ್ವರ ದೇವಳಕ್ಕೂ ಈಶಾನ್ಯ ದಿಕ್ಕಿನಲ್ಲಿರುವ ಪ್ರಾಚೀನವಾದ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಳಕ್ಕೆ ಮಠದ ವಿದ್ಚಾಂಸರು, ಪುರೋಹಿತರು ಮತ್ತು ಅಧಿಕಾರಿ ವರ್ಗದವರು ವಾದ್ಯ ಬಿರುದಾವಳಿ ಸಹಿತ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ತೆರಳಿ ಶ್ರೀ ಕೃಷ್ಣನ ಸಹೋದರಿಯಾಗಿರುವ ಶ್ರೀ ಮಹಿಷಮರ್ದಿನಿಗೆ ಪೂಜೆ ಕಪ್ಪಕಾಣಿಕೆ ಸಲ್ಲಿಸಿ ಶಮೀಪ್ರಸಾದ ಹಂಚಿ ಬರುವ ಪದ್ಧತಿ ಪ್ರಾಯಃ ಶ್ರೀ ವಾದಿರಾಜಸ್ವಾಮಿಗಳ ಕಾಲದಿಂದಲೂ ( 5 ಶತಮಾನ) ಚಾಲ್ತಿಯಲ್ಲಿದೆ.

ಬುಧವಾರ ಸಂಜೆ 4.00 ಗಂಟೆಗೆ ಸಾಂಪ್ರದಾಯಿಕ ಆಚರಣೆ ನಡೆಯಲಿದೆ. ಈ ವೇಳೆ ಈ ವರ್ಷ ಅತ್ಯಂತ ಸುಂದರವಾಗಿ ಪುನರುತ್ಥಾನಗೊಂಡು ಅಸಂಖ್ಯ ಭಕ್ತರ ಆಕರ್ಷಣೆಯ ಕೇಂದ್ರವಾಗಿರುವ ಕಡಿಯಾಳಿ ದೇವಳದ ಆವರಣದಲ್ಲಿ ಶಮೀ ವೃಕ್ಷದ ಕಟ್ಟೆಯನ್ನೂ ನಿರ್ಮಿಸಲಾಗಿದ್ದು, ಅದಕ್ಕೆ ಪೂಜೆಯನ್ನೂ ಸಲ್ಲಿಸಲು ಸಂಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಗ್ರಾಮ ಹಾಗೂ ಊರ ಪರವೂರ ಭಕ್ತರು ಉಪಸ್ಥಿತರಿದ್ದು ಶಮೀ ಪ್ರಸಾದ ಸ್ವೀಕರಿಸಿ ಶ್ರೀ ಕೃಷ್ಣ ಮುಖ್ಯಪ್ರಾಣ ಮತ್ತು ದೇವಿಯ ಅನುಗ್ರಹಪೂರ್ವಕ ಶುಭಫಲಗಳಿಗೆ ಪಾತ್ರರಾಗಬೇಕೆಂದು ವಿನಂತಿಸುತ್ತೇವೆ.

ಶಮೀ ಪೂಜೆಯ ಸಂದರ್ಭದ ಪ್ರಾರ್ಥನೆಯ ಶ್ಲೋಕ ಈ ರೀತಿ ಇದೆ

“ಶಮೀ ಶಮಯತೇ ಪಾಪಂ ಶಮೀ ಲೋಹಿತ ಕಂಟಕಾ ಧಾರಿಣ್ಯರ್ಜುನ ಬಾಣಾನಾಂ ರಾಮಸ್ಯ ಪ್ರಿಯವಾದಿನೀ ಕರಿಷ್ಯಮಾಣ ಯಾತ್ರಾಯಾಂ ಯಥಾಕಾಲಂ ಸುಖಂ ಮಯಾ ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮ ಪೂಜಿತೇ”

ಅರ್ಥ: ಕೆಂಪು ಮುಳ್ಳುಗಳಿಂದ ಕಂಗೊಳಿಸುವ ‘ಶಮೀ’ ವೃಕ್ಷವು ಪಾಪಗಳನ್ನು ಶಮನಗೊಳಿಸುವುದು. ಅರ್ಜುನನ ಬಾಣಗಳನ್ನು ಇರಿಸಲಾಗಿದ್ದ ದಿವ್ಯವಾದ ವೃಕ್ಷವದು. ಶ್ರೀರಾಮನಿಗೂ ಒಳಿತನ್ನು ನೀಡಿದ ಮರವಿದು. ಶ್ರೀರಾಮನಿಂದ ಪೂಜಿತವಾದ ಈ ದಿವ್ಯವೃಕ್ಷ ಈಗ ವಿಜಯ ಯಾತ್ರೆಗೂ ನೆರವಾಗಲಿ.

ಡಾ ಕೆ ರವಿರಾಜ ಆಚಾರ್ಯ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ , ಮತ್ತು ಸದಸ್ಯರು , ಅರ್ಚಕರು ಮತ್ತು ಸಿಬ್ಬಂದಿ, ಶ್ರೀ ಕಡಿಯಾಳಿ ದೇವಸ್ಥಾನ