ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಿರುವುದು ಸರಿಯಲ್ಲ: ಸಾಲುಮರದ ತಿಮ್ಮಕ್ಕ

ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ಮಾಡಿರುವುದು ಸರಿಯಲ್ಲ ಅಂತ ಸಾಲುಮರದ ತಿಮ್ಮಕ್ಕ ಹೇಳಿದ್ದಾರೆ. ದೇವಸ್ಥಾನಕ್ಕೆ ಸೂತಕವಾಗುವ ಹೆಂಗಸರು ಹೋಗಬಾರದೆಂದು ಅನೇಕ ವರ್ಷಗಳಿಂದ ಬಂದತಂತಹ ಸಂಪ್ರದಾಯವಿದೆ. ನನ್ನಷ್ಟು ವಯಸ್ಸಾದ ಮೇಲೆ ಅಲ್ಲಿಗೆ ಹೋಗಿ ದೇವರ ದರ್ಶನ ಪಡೆಯಬಹುದು. ನಾನು ವಯಸ್ಸಾದ ಮೇಲೆ ಹೋಗಿದ್ದೇನೆ ಎಂದು ಹೇಳಿದರು.

ಕಾಲೇಜು ಉಪನ್ಯಾಸಕಿಯಾದ ಬಿಂದು(44) ಹಾಗೂ ನಾಗರಿಕ ಸರಬರಾಜು ಇಲಾಖೆಯ ಸಿಬ್ಬಂದಿ ಕನಕದುರ್ಗ(42) ಎಂಬಿಬ್ಬರು ಮಹಿಳೆಯರು ಮಾನ-ಮರ್ಯಾದೆ ಇಲ್ಲದೇ ದೇವರ ದರ್ಶನ ಪಡೆಯಲು ಹೋಗಿದ್ದಾರೆ. ಇಬ್ಬರು ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಇಂದು ಬೆಳಗ್ಗೆ 3.45ಕ್ಕೆ ದೇವಾಲಯವನ್ನು ಪ್ರವೇಶಿಸಿದ್ದರು. ಈ ಸಮಯದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಮಹಿಳೆಯರ ಪ್ರವೇಶವನ್ನು ಖಚಿತಪಡಿಸಿದ ಕೇರಳ ಸಿಎಂ ಪಿಣಾರಯ್ ವಿಜಯನ್, ಇಬ್ಬರು ಮಹಿಳೆಯರು ಪೊಲೀಸ್ ಭದ್ರತೆಯಲ್ಲಿ ಶಬರಿಮಲೆ ಪ್ರವೇಶಿಸಿದ್ದಾರೆ. ಅವರಿಗೆ ರಕ್ಷಣೆ ನೀಡಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದು ಅವರು ತಿಳಿಸಿದರು.

ಅಯ್ಯಪ್ಪ ದೇಗುಲ ಪ್ರವೇಶಕ್ಕೆ 10 ವರ್ಷದಿಂದ ಮೇಲ್ಪಟ್ಟು 50 ವರ್ಷದ ಒಳಗಿನ ಮಹಿಳೆಯರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಈ ನಿರ್ಬಂಧವನ್ನು ತೆರವುಗೊಳಿಸಿ ಎಲ್ಲ ವಯಸ್ಸಿನ ಮಹಿಳೆಯರು ದೇವಾಲಯವನ್ನು ಪ್ರವೇಶಿಸಬಹುದು ಎನ್ನುವ ಐತಿಹಾಸಿಕಾ ತೀರ್ಪನ್ನು ಪ್ರಕಟಿಸಿದೆ ಎಂದರು.