ಲೈಂಗಿಕ ದೌರ್ಜನ್ಯ ಎಸಗಿದ ಪ್ರೊ. ಅರಬಿ, ತನಿಖಾ ವರದಿ ಮುಚ್ಚಿಟ್ಟ ಡಾ. ಎ.ಎಂ. ಖಾನ್ ವಿರುದ್ಧ ಕಾನೂನು ಕ್ರಮಕೈಗೊಳ್ಳಿ: ಎಬಿವಿಪಿ ಉಡುಪಿ ನಗರ ಆಗ್ರಹ

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರೊ. ಅರಬಿ ಹಾಗೂ ಇದರ ತನಿಖಾ ವರದಿ ಮುಚ್ಚಿಟ್ಟ ಮಾಜಿ ಕುಲಸಚಿವ ಡಾ. ಎ.ಎಂ. ಖಾನ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಬಿವಿಪಿ ಉಡುಪಿ ನಗರ ಕಾರ್ಯದರ್ಶಿ ಅನಿಲ್ ಶೆಣೈ ಆಗ್ರಹಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಂದ ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ವಿಶ್ವವಿದ್ಯಾಲಯದ ಕೊಠಡಿಯಲ್ಲಿ ಈ ಹಿಂದೆ ದೌರ್ಜನ್ಯ ನಡೆಸಿರುವುದನ್ನು ಮತ್ತು ಸದರಿ ಪ್ರಕರಣದ ವಿಚಾರಣೆ ನಡೆದು ವರದಿ ನೀಡಿ 2 ವರ್ಷಗಳು ಸಾಗುತ್ತಾ ಬಂದಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರದ ವತಿಯಿಂದ ಇಂದು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಸಂದೇಶ್ ರೈ ಮಜಕ್ಕಾರ್ , ತಾಲೂಕು ಸಂಚಾಲಕ್ ಶ್ರೀಹರಿ , ಪ್ರಮುಖರಾದ ಆಶಿಶ್ , ಸಿದ್ದಾಂತ್ , ಶ್ರೇಯಸ್ , ಸೂರಜ್ , ಹಿರಿಯ ಕಾರ್ಯಕರ್ತರಾದ ಶಿವಾನಂದ ನಾಯಕ್ ಮುಂತಾದವರು ಉಪಸ್ಥಿತರಿದ್ದರು.