ಆತ್ರಾಡಿ: ಸರಣಿ ಅಪಘಾತ; ಬೈಕ್ ಸವಾರರಿಬ್ಬರು ಗಂಭೀರ

ಹಿರಿಯಡಕ: ಕಾರು ಚಾಲಕ ಮಾಡಿದ ಎಡವಟ್ಟಿನಿಂದ ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಆತ್ರಾಡಿ-ಮದಗ ರಸ್ತೆಯಲ್ಲಿ ಇಂದು ಸಂಜೆ ಸಂಭವಿಸಿದೆ.

ಕಾರು ಚಾಲಕ ಹಿಡನ್ ವುಡ್ ರೆಸ್ಟೋರೆಂಟ್ ರಸ್ತೆಯಿಂದ ಏಕಾಏಕಿಯಾಗಿ ಕಾರನ್ನು ಆತ್ರಾಡಿ-ಮದಗ ಹೆದ್ದಾರಿ ರಸ್ತೆಗೆ ಇಳಿಸಿದ ಪರಿಣಾಮ ಹಿರಿಯಡಕ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಸವಾರೆ ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ.

ಇದರಿಂದ ಸ್ಕೂಟರ್ ಸವಾರೆ ಹಾಗೂ ಬೈಕ್ ಸವಾರರಿಬ್ಬರು ರಸ್ತೆಗೆ ಉರುಳಿದ್ದಾರೆ. ಘಟನೆಯಿಂದ ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸ್ಕೂಟರ್ ಸವಾರೆ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ.

ಬೈಕ್ ಸವಾರರಿಬ್ಬರು ಕುಂದಾಪುರದವರಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು ಎನ್ನಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕುಂದಾಪುರಕ್ಕೆ ಬರುತ್ತಿದ್ದರು ಎಂದು ತಿಳಿದುಬಂದಿದೆ.