ಹಿರಿಯ ಚಲನಚಿತ್ರ ನಟ ಕಾರ್ಕಳ ಶೇಖರ್ ಭಂಡಾರಿ (72) ನಿಧನ

ಕಾರ್ಕಳ: ಹಿರಿಯ ಚಲನಚಿತ್ರ ನಟ ಕಾರ್ಕಳ ಶೇಖರ್ ಭಂಡಾರಿ (72) ಅವರು ಇಂದು ಅನಾರೋಗ್ಯದಿಂದ ನಿಧನರಾದರು.
ವಿಜಯ ಬ್ಯಾಂಕ್ ನ ನಿವೃತ್ತ ಉದ್ಯೋಗಿಯಾಗಿದ್ದ ಅವರು, ಚಿಕ್ಕ ವಯಸ್ಸಿನಲ್ಲಿಯೇ ರಂಗಭೂಮಿಯಲ್ಲಿ ಬಣ್ಣ ಹಚ್ಚಿದ್ದರು. ಬಳಿಕ ಚಲನಚಿತ್ರ ರಂಗದಲ್ಲೂ ಹಾಸ್ಯ, ಪೋಷಕ ನಟನಾಗಿ ತಮ್ಮ ಛಾಪು ಮೂಡಿಸಿದ್ದಾರೆ.
ಬರವಣಿಗೆಯಲ್ಲೂ ತಮ್ಮ ಪ್ರತಿಭೆ ತೋರಿಸಿದ್ದ ಶೇಖರ್ ಅವರು ಈಚೆಗೆ ‘ಮಸ್ತಕದಿಂದ ಪುಸ್ತಕಕ್ಕೆ” ಎಂಬ ಕೃತಿಯನ್ನು ಹೊರತಂದಿದ್ದರು.
2012-14 ರ ಅವಧಿಯಲ್ಲಿ ಬೆಂಗಳೂರು ಸವಿತಾ ಸಮಾಜ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿಜಯಾ ಬ್ಯಾಂಕ್ ನ ವಿಜಯಶ್ರೀ ಪ್ರಶಸ್ತಿ, ಡಾ. ರಾಜ್ ಕುಮಾರ್ ಸದ್ಭಾವನಾ ಪ್ರಶಸ್ತಿ, ವೀರ ಕನ್ನಡಿಗ ಪ್ರಶಸ್ತಿ, ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಪುರಸ್ಕಾರ, ಡಾಕ್ಟರ್ ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿಗಳು ಅವರಿಗೆ ಲಭಿಸಿವೆ.