ಉಡುಪಿ: ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ ಪ್ರಧಾನ ಸಮಾರಂಭ

ಉಡುಪಿ: ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾವ ಮತ್ತು ಅರ್ಥವನ್ನು ದಾಟಿಸುವಾಗ ಬಹಳಷ್ಟು ಪರಿಶ್ರಮದ ಅಗತ್ಯವಿದೆ. ಈ ನಿಟ್ಟಿನಲ್ಲಿ ಅನುವಾದಕರ  ಜ್ಞಾನವಿಸ್ತಾರ ಬಹಳ ಮುಖ್ಯ
ಎಂದು ಬಹುಭಾಷಾತಜ್ಞ ಡಾ. ಎನ್. ಟಿ. ಭಟ್ಟ ಹೇಳಿದರು.
ಶನಿವಾರ ನೂತನ ರವೀಂದ್ರ ಮಂಟಪದಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನಲ್ಲಿ ರಾಷ್ಟ್ರಕವಿ  ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ಸಂಯುಕ್ತಾಶ್ರಯದಲ್ಲಿ ನಡೆದ ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.  ಅನುವಾದಕನಾಗಿ ಕೆಲವೊಂದು ಪ್ರಯತ್ನಗಳು ನನ್ನಿಂದ ಆಗಲ್ಪಟ್ಟಿವೆ ಯಾದರೂ ಈ ಕ್ಷೇತ್ರದಲ್ಲಿ ಇನ್ನು  ಸಾಗುವ ದಾರಿ ಬಹಳಷ್ಟಿವೆ. ಸೇಡಿಯಾಪು ಪ್ರಶಸ್ತಿ ದೊರಕಿದ್ದು ನನ್ನ ಸೌಭಾಗ್ಯ ಎಂದರು.
ಪ್ರಶಸ್ತಿ ಪುರಸ್ಕೃತರ ಕುರಿತು ಪ್ರೊ. ಕೆ.ಪಿ ರಾವ್ ತಮ್ಮ ಅಭಿನಂದನಾ ಭಾಷಣದಲ್ಲಿ ಯೋಗ್ಯ ವ್ಯಕ್ತಿಗೆ ಈ ಪ್ರಶಸ್ತಿ ಸಂದಿದೆ.  ತೆರೆಮರೆಯ ವಿದ್ವಾಂಸರಾದ ಡಾ. ಎನ್.ಟಿ ಭಟ್ ವಿದ್ವತ್ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಆದ್ದರಿಂದ  ಈ ಆಯ್ಕೆ ಅತ್ಯಂತ  ಸೂಕ್ತ, ಅವರ ಶ್ರಮಕ್ಕೆ ಸಿಕ್ಕಿದ ಗೌರವ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.  ಹೆಚ್. ಶಾಂತಾರಾಮ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷರಾದ  ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ  ಸೇಡಿಯಾಪು ಛಂದಸ್ಸಂಪುಟದ ಕುರಿತು ಡಾ. ಪಾದೇಕಲ್ಲು ವಿಷ್ಣು ಭಟ್ಟ
 ಉಪನ್ಯಾಸ ನೀಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕರಾದ ಪ್ರೊ. ವರದೇಶ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಶ್ಮಿತಾ ಎ. ಕಾರ್ಯಕ್ರಮ ನಿರ್ವಹಿಸಿದರು.
ಶ್ರೀಮತಿ ಉಮಾಉದಯಶಂಕರ್ ಪ್ರಾರ್ಥಿಸಿದರು, ಪ್ರೊ. ಎಂ. ಎಲ್. ಸಾಮಗ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಸಮಿತಿಯ ಸದಸ್ಯರಾದ ಎಸ್.ಜೆ ಭಟ್ ಉಪಸ್ಥಿತರಿದ್ದರು.