ಎಸ್‌ಡಿಎಂ ಕಾಲೇಜಿನ ವಾರ್ಷಿಕೋತ್ಸವದಲ್ಲಿ ‘ರಿಷಬ್‌ ಶೆಟ್ಟಿ’ ಕನಸು ಸಕಾರಗೊಳ್ಳಲು ಪರಿಶ್ರಮ ಅಗತ್ಯ

ಉಡುಪಿ: ಕನಸು ಕಾಣುವುದು ಮಾತ್ರ ಮುಖ್ಯವಲ್ಲ. ಅದನ್ನು ಸಕಾರಗೊಳಿಸಲು ಪರಿಶ್ರಮದೊಂದಿಗೆ ಮುನ್ನಡೆಯಬೇಕು ಎಂದು ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ
ಹೇಳಿದರು.
ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾಲೇಜಿನ ೬೦ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಕುಂದಾಪುರದ ಹಳ್ಳಿಯೊಂದರಲ್ಲಿ ಬೆಳೆದ ಹುಡುಗನಾಗಿದ್ದು, ನನ್ನದೇ ಆದ ಕಲ್ಪನಾ ಲೋಕದಲ್ಲಿದ್ದೆ. ಆದರೆ ಬೆಂಗಳೂರಿನಲ್ಲಿ ಆ ಕಲ್ಪನೆಗಳನ್ನೇ ಕನಸನ್ನಾಗಿಸಿ, ಕನಸುಗಳನ್ನೇ ಗುರಿಯಾಗಿಸಿ ಪ್ರಯತ್ನಪಟ್ಟು ಯಶಸ್ಸು ನನ್ನದಾಗಿಸಿಕೊಂಡೆ. ಹಾಗಾಗಿ ಕನಸು ಕಾಣುವುದರಲ್ಲಿ ಮಾತ್ರ ಸೀಮಿತವಾಗದೇ ಅದನ್ನು ಪರಿಶ್ರಮದೊಂದಿಗೆ ನನಸಾಗಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.


ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಶ್ರೀನಿವಾಸ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ಹಾಗೂ ಪಿಎಚ್.ಡಿ ಅಧ್ಯಯನ ಕೇಂದ್ರದ ಡೀನ್ ಡಾ. ನಿರಂಜನ್‌ ರಾವ್‌
ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿ ಸಂಘ ಅಧ್ಯಕ್ಷೆ ಆರ್‌. ಮೇಘನಾ ಸುರೇಗಾಂವಕರ್ ಸಂಘದ ವಾರ್ಷಿಕ ಕಾರ್ಯ ಚಟುವಟಿಕೆಗಳ ವರದಿ ಓದಿದರು. ಸಹಾಯಕ ಡೀನ್‌ ಡಾ.ಎಸ್‌. ನಾಗರಾಜ್‌, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಚೇತ ಕುಮಾರಿ, ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಕೆ. ವೀರಕುಮಾರ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಪರೀಕ್ಷಿತ್‌, ಕಾರ್ಯದರ್ಶಿ ಶ್ರೀನಿಧಿ ಶೆಟ್ಟಿ ಉಪಸ್ಥಿತರಿದ್ದರು.