ಕೋಟ: ಮಧುವನ ವಿವೇಕಾನಂದ ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಹಬ್ಬ ಆಚರಣೆ

ಕೋಟ: ವಿವೇಕಾನಂದ ಹಿ‌.ಪ್ರಾ.ಶಾಲೆ ಮಧುವನ – ಅಚ್ಲಾಡಿ ಇಲ್ಲಿನ ಶಾಲಾ ವಾರ್ಷಿಕೋತ್ಸವ “ಮಕ್ಕಳ ಹಬ್ಬ” ಡಿ. 26 ರಂದು ಶಾಲಾ ವಠಾರದಲ್ಲಿ ಜರಗಿತು.

ಉದ್ಯಮಿ ಬನ್ನಾಡಿ ದಿನಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಜನಾಂಗವು ಮುಂದಿನ ಭವಿಷ್ಯದ ಭರವಸೆಯಾಗಿದೆ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಭವಿಷ್ಯ ಉಜ್ವಲಗೊಳಿಸಿ ಎಂದರು.

ಮುಂಬೈ ಉದ್ಯಮಿ, ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಅಚ್ಲಾಡಿ ಮಾತನಾಡಿ, ಜೀವನದಲ್ಲಿ ಕಷ್ಟ ಪಟ್ಟು ದುಡಿದರೆ ಯಶಸ್ಸು ಸಾಧ್ಯ. ನಾವೆಲ್ಲ ಬದುಕಲ್ಲಿ ಸಾಕಷ್ಟು ಹೋರಾಟ ಮಾಡಿ ಮುಂದೆ ಬಂದವರು. ಮಕ್ಕಳಿಗೆ ಸುಖದ ಜೊತೆಗೆ ಹೋರಾಟದ ಜೀವನ‌ ಪರಿಚಯಿಸಿ ಎಂದರು.

ಅಜ್ಜರಕಾಡು ಮಹಿಳಾ ಕಾಲೇಜು ಉಪನ್ಯಾಸಕ ಡಾ.ರವಿರಾಜ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.

ಅಚ್ಲಾಡಿ, ಕೆ.ಎಂ.ಸಿ. ಕ್ಯಾನ್ಸರ್ ವಿಭಾಗದ ವೈದ್ಯಕೀಯ ಮುಖ್ಯಸ್ಥ ಡಾ. ನವೀನ್ ಕುಮಾರ್, ಉದ್ಯಮಿ ಪ್ರಭಾಕರ ಹೆಗ್ಡೆ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿಜೇಂದ್ರ ಉಪಾಧ್ಯ, ವಿದ್ಯಾರ್ಥಿ ನಾಯಕ ಕಾರ್ತಿಕ್ ಉಪಸ್ಥಿತರಿದ್ದರು.

ಶಾಲಾ ಸಂಚಾಲಕ ಅರುಣಾಚಲ ಹೆಗ್ಡೆ ಸ್ವಾಗತಿಸಿ, ಮುಖ್ಯ ಶಿಕ್ಷಕ ಲಚ್ಚು ನಾಯಕ್ ವರದಿ ವಾಚಿಸಿದರು. ಉತ್ಸವ ಸಮಿತಿ ಅಧ್ಯಕ್ಷ ಸುರೇಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕರಾದ ಜಯಲತಾ ಶೆಟ್ಟಿ, ಸುಭಾಸ್ ನಾಯಕ್, ನಯನಾ ಎ., ಸವಿತಾ ಶೆಟ್ಟಿ, ರಮ್ಯಾ, ಶ್ರೀಮತಿ ಶೆಟ್ಟಿಗಾರ್, ಕು. ಜಯ ಸಹಕರಿಸಿದರು.