370 ನೇ ವಿಧಿಯ ರದ್ದತಿಯನ್ನು ಪ್ರಶ್ನಿಸುವ ಅರ್ಜಿಗಳ ಆಲಿಕೆ: 5 ನ್ಯಾಯಾಧೀಶರ ಪೀಠವನ್ನು ಮರು-ರಚಿಸಲು ಒಪ್ಪಿದ ಸುಪ್ರೀಂ ಕೋರ್ಟ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಬೇಸಿಗೆ ರಜೆಯ ನಂತರ ಆಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು, ರಾಜ್ಯದಲ್ಲಿ ನಡೆಸಲಾಗುತ್ತಿರುವ ಡಿಲಿಮಿಟೇಶನ್ ಕಸರತ್ತನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಶೇಖರ್ ನಾಫಡೆ ಅವರ ಸಲ್ಲಿಕೆಗಳನ್ನು ಗಮನಿಸಿದೆ.

“ಇದು ಆರ್ಟಿಕಲ್ 370 ವಿಷಯ. ಡಿಲಿಮಿಟೇಶನ್ ಕೂಡ ನಡೆಯುತ್ತಿದೆ’ ಎಂದು ಹಿರಿಯ ವಕೀಲರು ತಿಳಿಸಿದರು. ಪ್ರತಿಯಾಗಿ “ನಾನು ನೋಡುತ್ತೇನೆ”, “ಇದು ಐದು ನ್ಯಾಯಾಧೀಶರಿಗೆ ಸಂಬಂಧಿಸಿದ ವಿಷಯವಾಗಿದೆ. ನಾನು ಬೆಂಚ್ ಅನ್ನು ಪುನರ್ರಚಿಸಬೇಕಾಗಿದೆ” ಎಂದು ಮುಖ್ಯನಾಯಾಧೀಶರು ತಿಳಿಸಿದ್ದಾರೆ.

ಬೇಸಿಗೆ ರಜೆಯ ನಂತರ ಅರ್ಜಿಗಳನ್ನು ಆಲಿಸಲು ಐವರು ನ್ಯಾಯಾಧೀಶರ ಪೀಠವನ್ನು ಮರು ರಚನೆ ಮಾಡಲು ನ್ಯಾಯಾಲಯ ಒಪ್ಪಿಗೆ ನೀಡಿದೆ