ಸಮಾಜದ ಏಳಿಗೆಗೆ ಸಾಂಸ್ಕೃತಿಕ ಕಲೆ ಮುಖ್ಯ: ಗೋಪಾಲ ಶೆಟ್ಟಿ

ಉಡುಪಿ: ಸಮಾಜದ ಏಳಿಗೆಗೆ ಸಂಗೀತ, ನೃತ್ಯಗಳಂಥ ಸಾಂಸ್ಕೃತಿಕ ಕಲೆಗಳು ಅತಿ ಮುಖ್ಯ ಎಂದು ಹಿರಿಯ ಲೇಖಕ ಬಿ. ಗೋಪಾಲ ಶೆಟ್ಟಿ ಹೇಳಿದರು.
ಉಡುಪಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಮಂಗಳವಾರ ನಡೆದ 42ನೇ ವಾದಿರಾಜ ಕನಕದಾಸ ಸಂಗೀತೋತ್ಸವದ ಸಮಾರೋಪ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಲ್ಲಿರುವ ಪ್ರತಿಭೆಗಳನ್ನು ಎಳವೆಯಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಬೇಕು. ಈ ರೀತಿಯ ಸಾಂಸ್ಕೃತಿಕ ವಾತಾವರಣ ನಿರ್ಮಿಸುವಲ್ಲಿ ಹಾಗೂ ಮಕ್ಕಳ ಪ್ರತಿಭೆ ಗುರುತಿಸುವಲ್ಲಿ ಸಂಗೀತೋತ್ಸವ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿದೆ ಎಂದರು.
ಈ ಸಂದರ್ಭದಲ್ಲಿ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು. ಕನಕದಾಸ ಅಧ್ಯಯನ ಸಂಶೋಧನ ಪೀಠದ ಸಂಯೋಜನಾಧಿಕಾರಿ ಪ್ರೊ. ವರದೇಶ್‌ ಹಿರೇಗಂಗೆ, ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕ ಉಮಾ ಉದಯಶಂಕರ್‌ ಉಪಸ್ಥಿತರಿದ್ದರು.
ಸಂಗೀತ ಸ್ಪರ್ಧೆಯ ವಿಜೇತರ ವಿವರ:
4ನೇ ತರಗತಿಯೊಳಗಿನ ವಿಭಾಗ: ಸುರಭಿ ಪ್ರಥಮ, ಎಸ್‌.ಎಚ್‌. ಐಸಿರಿ ದ್ವಿತೀಯ, ರಿಷಿಕಾ ಎಂ. ದೇವಾಡಿಗ ತೃತೀಯ. ೪ರಿಂದ 7ನೇ ತರಗತಿ ವಿಭಾಗ: ಅಮೃತಾ ಜಿ. ಪ್ರಥಮ, ಕೆ. ವೇದವ್ಯಾಸ ಭಟ್‌ ದ್ವಿತೀಯ, ಸುಮಧ್ವ ತಂತ್ರಿ ತೃತೀಯ. 8ನೇ ತರಗತಿಯಿಂದ ಪಿಯುಸಿ ವಿಭಾಗ: ಜಿ.ಎಂ. ಚೈತನ್ಯ ಪ್ರಥಮ, ಶ್ರೀಗೌರಿ ದ್ವಿತೀಯ, ಸುಮೇಧ ತಂತ್ರಿ ತೃತೀಯ. ಪದವಿ ಹಾಗೂ ಸಾರ್ವಜನಿಕ ವಿಭಾಗ: ರಂಜನಿ ಸಾಮಗ ಪ್ರಥಮ, ಕೆ.ಎಸ್‌. ವಿಘ್ನೇಶ್‌ ದ್ವಿತೀಯ, ಯಶೋದಾ ಭಟ್‌ ತೃತೀಯ.