SIR ಮುಗಿದ ಕೂಡಲೇ ಗೃಹಲಕ್ಷ್ಮೀ ಮರುಪರಿಶೀಲನೆ ಶುರು, ಹೇಗಿರುತ್ತೆ ಗೃಹಲಕ್ಷ್ಮೀ ಪರಿಷ್ಕರಣೆ?

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಗೃಹಲಕ್ಷ್ಮೀ (Gruhalakshmi) ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಆರಂಭವಾಗಲಿದೆ. ಈ ಸಂಬಂಧ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ.

ಹೊಸ ಮಾರ್ಗಸೂಚಿಯಂತೆ, ಗೃಹಲಕ್ಷ್ಮೀ ಯೋಜನೆಯ ಮರುಪರಿಶೀಲನೆ ಗ್ಯಾರಂಟಿ ಅನುಷ್ಠಾನ ಸಮಿತಿಗಳ ಸಮ್ಮುಖದಲ್ಲಿ ನಡೆಯಲಿದ್ದು, ಅರ್ಜಿ ಸಲ್ಲಿಕೆ ಹಾಗೂ ಪರಿಶೀಲನೆ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ.

ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚನೆ

ಈ ಕಾರ್ಯಕ್ಕಾಗಿ ಸರ್ಕಾರ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದೆ.

  • ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜಿಲ್ಲಾಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಸದಸ್ಯರಾಗಿರುತ್ತಾರೆ.
  • ತಾಲ್ಲೂಕು ಮಟ್ಟದ ಸಮಿತಿಯಲ್ಲಿ ತಹಶೀಲ್ದಾರ್, ತಾಲ್ಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಕಾರ್ಯನಿರ್ವಹಿಸಲಿದ್ದಾರೆ.

ಫಲಾನುಭವಿಗಳ ಪತ್ತೆಗೆ ಸರ್ಕಾರದ ಮಾರ್ಗಸೂಚಿ

ಗೃಹಲಕ್ಷ್ಮೀ ಫಲಾನುಭವಿಗಳ ಗುರುತಿಗಾಗಿ ಸರ್ಕಾರ ಈ ಕ್ರಮಗಳನ್ನು ಅನುಸರಿಸಲು ಸೂಚಿಸಿದೆ.

  • ಆಹಾರ ಇಲಾಖೆಯ ಡೇಟಾಬೇಸ್‌ನಲ್ಲಿರುವ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಫಲಾನುಭವಿಗಳ ಪತ್ತೆ.
  • ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಪರಿಶೀಲನೆ ನಡೆಸಿ ಗುರುತಿನ ದೃಢೀಕರಣ.
  • ಆಹಾರ ಇಲಾಖೆಯ ಡೇಟಾಬೇಸ್‌ನಲ್ಲಿ ದಾಖಲಾಗಿರುವ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಗೂ ಬಯೋಮೆಟ್ರಿಕ್ ದೃಢೀಕರಣ ನೀಡುವುದು ಕಡ್ಡಾಯ.
  • ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ನೋಂದಣಿ ಮಾಡಲು ಅವಕಾಶ.
  • ಫಲಾನುಭವಿಗಳು ಸ್ವಇಚ್ಛೆಯಿಂದ ಯೋಜನೆಯ ಸೌಲಭ್ಯ ತ್ಯಜಿಸುವ ಅವಕಾಶವೂ ನೀಡಲಾಗಿದೆ.

ಮರುಪರಿಶೀಲನೆಯಲ್ಲಿ ಸಂಗ್ರಹವಾಗುವ ಮಾಹಿತಿ

ಪರಿಶೀಲನೆ ವೇಳೆ ಫಲಾನುಭವಿಗಳ ಕುರಿತು ಈ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

  • ಪಿಂಚಣಿದಾರರ ವಿವರ
  • ಆದಾಯ ತೆರಿಗೆ (ಐಟಿ) ಪಾವತಿದಾರರ ಮಾಹಿತಿ
  • ಜಿಎಸ್ಟಿ ನೋಂದಣಿ ಹೊಂದಿರುವವರ ಮಾಹಿತಿ
  • ಸರ್ಕಾರಿ ಸೇವೆಯಲ್ಲಿರುವವರ ಮಾಹಿತಿ
  • ನಿವೃತ್ತಿ ಪಿಂಚಣಿ ಪಡೆಯುತ್ತಿರುವವರ ವಿವರ
  • ಭಾವಚಿತ್ರದೊಂದಿಗೆ ಮತದಾರರ ಗುರುತಿನ ಚೀಟಿ ಪರಿಶೀಲನೆ

ರಾಜ್ಯ ಸರ್ಕಾರದ ಈ ಕ್ರಮದಿಂದ ಗೃಹಲಕ್ಷ್ಮೀ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅನರ್ಹರಿಗೆ ಸೌಲಭ್ಯ ತಲುಪದಂತೆ ಮಾಡುವ ಉದ್ದೇಶ ಹೊಂದಿದೆ.