ರಾಂಪುರದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಗೋವಿನ ರಕ್ಷಣೆ

40 ಅಡಿ ಆಳದ ಬಾವಿಗೆ ಬಿದ್ದ ಗೋವನ್ನು ರಕ್ಷಣೆ ಮಾಡಿದ ಘಟನೆ ಅಲೆವೂರಿನ ರಾಂಪುರದಲ್ಲಿ ಇಂದು ನಡೆದಿದೆ‌.

ಮೇಯಲು ಬಿಟ್ಟಿದ್ದ ಗಂಡು ಕರು, ಬಾವಿಯ ಬಳಿ‌ ಸೊಪ್ಪು ತಿನ್ನಲು ಹೋಗಿದೆ. ಆಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯೊಳಗೆ ಬಿದ್ದಿದೆ. ಇದನ್ನು ನೋಡಿದ ಸ್ಥಳೀಯರು ಕಾರ್ಯಕರ್ತ ಪ್ರಸಾದ್ ಪೂಜಾರಿ ಅವರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ತೆರಳಿದ ಪ್ರಸಾದ್ ಅವರು, ಮುಳುಗು ತಜ್ಞ ಅಶೋಕ್ ಶೆಟ್ಟಿ ದಂದೂರುಕಟ್ಟೆ ಮಾಹಿತಿ ನೀಡಿದರು. ಅದರಂತೆ ತಕ್ಷಣ ಸ್ಥಳಕ್ಕೆ ಬಂದ ಅಶೋಕ್ ಶೆಟ್ಟಿ ಅವರು ಬಾವಿಗಿಳಿದು ಕರು ಮುಳುಗದಂತೆ ಎತ್ತಿ ಹಿಡಿದರು.

ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಅಶೋಕ್ ಶೆಟ್ಟಿ ಅವರು ಸೇರಿಕೊಂಡು ಕರುವಿನ ನಾಲ್ಕು ಕಾಲುಗಳ ಮಧ್ಯೆ ಹಗ್ಗಕಟ್ಟಿ ಕರುವನ್ನು ಮೇಲಕ್ಕೆತ್ತಿದರು. ಸ್ಥಳೀಯರು ಕಾರ್ಯಾಚರಣೆಗೆ ಸಹಕಾರ ನೀಡಿದರು.